ಮೂಲಭೂತವಾಗಿ ಶಿಲ್ಪಕಲೆಯನ್ನು ಎರಡು ಭಾಗವಾಗಿ ವಿಭಾಗಿಸಬಹುದು. ಒಂದು, ನಾಲ್ಕು ಕಡೆಗಳಿಂದಲೂ ವೀಕ್ಷಿಸಬಹುದಾದ ಶಿಲ್ಪಗಳು ಉದಾಹರಣೆಗೆ ವೀನಸ್ ಆಫ್ ವಿಲ್ಲೆನ್‌ಡಾರ್ಫ್, ಈ ಮಾದರಿಯ ಶಿಲ್ಪಗಳು ಪರಿಪೂರ್ಣತೆಗೆ ಒತ್ತು ಕೊಟ್ಟಂತೆ ಪೂರ್ತಿಯಾಗಿ ಕಡೆದಂತವುಗಳಾಗಿರುತ್ತವೆ. ಇಂತಹ ಶಿಲ್ಪದ ಸುತ್ತಲೂ ಕಲೆಯ ಮೊಹರುಗಳಿರುತ್ತವೆ. ಮತ್ತು ಇವನ್ನು ಸುತ್ತಲಿಂದಲೂ ವೀಕ್ಷಿಸಬಹುದು.
ಮತ್ತೊಂದು ಒಂದೇ ಮೇಲ್ಮೈನ ಶಿಲ್ಪಗಳು(ಉಬ್ಬು ಅಥವಾ ತಗ್ಗು ಶಿಲ್ಪಗಳು). ಉದಾಹರಣೆಗೆ ವೀನಸ್ ಆಫ್ ಲಾಸೆಲ್ ಶಿಲ್ಪ.

ಬಹುತೇಕ ಇತಿಹಾಸಪೂರ್ವ ಶಿಲ್ಪಗಳು ಸುತ್ತಲೂ ಕಡೆದಂತವುಗಳಾಗಿದ್ದರೂ ಪ್ಯಾಲಿಯೋಲಿಥಿಕ್ ಶಿಲ್ಪಿಗಳು ಏಕಮುಖ ಕೆತ್ತನೆಯ ಶಿಲ್ಪಗಳನ್ನೂ ಕೆತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ವೀನಸ್ ಆಫ್ ಲಾಸೆಲ್. ಇದು ಕೆಂಪು ವರ್ಣದ ಶಿಲೆಯಲ್ಲಿ ಕಡೆಯಲಾದ ಶಿಲ್ಪ. ಬಹುಷಃ ಕೆಂಪು ವರ್ಣ ಮಗುವಿನ ಹುಟ್ಟುವಿಕೆಯನ್ನು ಬಿಂಬಿಸುವಂತದ್ದು. ಉಪಸ್ಥಾಶಯ ಮತ್ತು ಸ್ತನದ ಆಕೃತಿ ಸಾಮಾನ್ಯ ಆಕಾರಕ್ಕಿಂತ ತುಸು ದೊಡ್ಡದಾಗೇ ಕೆತ್ತಲಾಗಿದೆ. ಉಳಿದಂತೆ ವೀನಸ್ ಆಫ್ ವಿಲ್ಲೆಂಡಾರ್ಫ್ ಶಿಲ್ಪಕ್ಕಿಂತ ವಿವರವಾಗಿ ಕೈಯನ್ನು ತೋರಿಸಲಾಗಿದೆ. ಈ ಮಹಿಳೆ ಕೈನಲ್ಲಿ ಯಾವುದೋ ಪ್ರಾಣಿಯ ಕೋಡನ್ನು ಹಿಡಿದಿದ್ದಾಳೆ. ಮಹಿಳೆಯ ಆಕೃತಿಯ ಜೊತೆ ಜೊತೆಗೆಂಬಂತೆ ಪ್ಯಾಲಿಯೋಲಿಥಿಕ್ ಶಿಲ್ಪಿಗಳು ಕುದುರೆ, ಕಾಡುಕೋಣ, ಎತ್ತು, ಜಿಂಕೆ, ಮ್ಯಾಮತ್, ಗಂಡು ಹಂದಿ, ಖಡ್ಗ ಮೃಗ, ಮೀನು ಮತ್ತು ಹಕ್ಕಿಗಳನ್ನೂ ಸಹ ಕೆತ್ತಿದ್ದಾರೆ. ತಲೆಯನ್ನು ತಿರುಗಿಸಿರುವ ಕಾಡುಕೋಣದ ಆಕೃತಿ ಫ್ರಾನ್ಸ್ ನಲ್ಲಿ ದೊರೆತಿದೆ.

ಈ ಶಿಲ್ಪವು ಫ್ರಾನ್ಸ್ ನ ಲಾ ಮಾಡೆಲೈನ್ ಎಂಬಲ್ಲಿ ದೊರೆತಿದ್ದು ೧೦.೫ ಸೆಂ.ಮೀ ಗಳಷ್ಟು ಎತ್ತರವಿದೆ. ಇದು ಕ್ರಿ.ಪೂ ೧೧,೦೦೦ ದಿಂದ ೯,೦೦೦ ದ ನಡುವಿನ  ಕಾಲದ್ದಿರಬಹುದೆಂದು ಅಂದಾಜಿಸಲಾಗಿದೆ. ಈ ಶಿಲ್ಪದಲ್ಲಿ ಕಾಡುಕೋಣದ ಕಾಲುಗಳು ಅಸ್ಪಷ್ಟವಾಗಿದ್ದು ಹಿಂದೆ ತಿರುಗಿರುವ ಮುಖವನ್ನು ಮಾತ್ರ ಸೂಕ್ಷ್ಮವಾಗಿ ಕೆತ್ತಲಾಗಿದೆ. ಕತ್ತಿನ ಕೆಳಗಿನ ಮತ್ತು ಮೇಲಿನ ಕೂದಲುಗಳನ್ನು ಸಾಕಷ್ಟು ವಿವರವಾಗಿ ತೋರಿಸಲಾಗಿದೆ. ಫ್ರಾನ್ಸ್ ನ Tuc d’ Audoubert’  ಎಂಬ ಪ್ರದೇಶದ ಆಳ ಗುಹೆಗಳಲ್ಲಿ ಹಸಿ ಮಣ್ಣಿನಿಂದ ಮಾಡಿದ ಮತ್ತೆ ಕೆಲವು ಪ್ರಾಣಿಗಳ ಶಿಲ್ಪಗಳೂ ದೊರೆತಿವೆ.

                                         -ಸುಗಂಧ

ಯುರೋಪ್ ಖಂಡದಲ್ಲಿ ಕಲೆಯ ಇತಿಹಾಸದ ತಳ ನಮಗೆ ದಕ್ಕುವುದು  ಪ್ಯಾಲಿಯೋಲಿಥಿಕ್ ಕಾಲ (ಕ್ರಿ.ಪೂ ೨೫,೦೦೦) ವೆಂದು ಕರೆಯಲ್ಪಡುವ ಶಿಲಾಯುಗದ ಘಟ್ಟದಲ್ಲಿ. (ಕ್ರಿ.ಪೂ ೫೦,೦೦೦ ದಿಂದ ಕ್ರಿ.ಪೂ ೮೦೦೦ ದ ನಡುವಿನ ಕಾಲವನ್ನು ಶಿಲಾಯುಗದ ಪ್ಯಾಲಿಯೋಲಿಥಿಕ್ ಪ್ರಾರಂಭದ ಕಾಲ ಎಂದು ಗುರುತಿಸಲಾಗಿದೆ.) ಈ ಕಾಲದ ಜನರು ನಿರಂತರ ವಲಸೆಗಾರರಾಗಿದ್ದು ಅವರ ಈ ವರ್ತನೆಗೆ ಆಹಾರದ ಹಂಚಿಕೆಯಲ್ಲಿನ ಅಸಮತೆಯೇ ಕಾರಣವೆಂದು ತರ್ಕಿಸಲಾಗಿದೆ. ಗುಂಪು ಗುಂಪಾಗಿ ವಾಸಿಸುತ್ತಿದ್ದ ಇವರುಗಳು ಗುಹೆಗಳಲ್ಲಿ, ಚಿಕ್ಕ ಪುಟ್ಟ ಕಲ್ಲು, ಮರದ ಸಂದುಗಳಲ್ಲಿ, ಮಣ್ಣು-ಮರಗಳನ್ನು ಉಪಯೋಗಿಸಿ ನಿರ್ಮಿಸಿದ್ದ ಗುಡಿಸಲುಗಳಲ್ಲಿ ವಾಸಿಸುತ್ತಿದ್ದುದಕ್ಕೆ ಆಧಾರಗಳಿವೆ.
ಈ ಕಾಲದಲ್ಲಿಯೇ ಕಲೆಯೆಂಬುದು ಹುಟ್ಟಿಕೊಂಡಿತೆನ್ನಲಾಗಿದೆ. ಈ ಕಾಲದ ಕಲಾವಿದರು ಕಲ್ಲು, ಮಣ್ಣು, ದಂತ, ಮೂಳೆಗಳಲ್ಲಿ ಪ್ರಾಣಿಗಳು, ಮನುಷ್ಯರ ಶಿಲ್ಪಗಳನ್ನು ನಿರ್ಮಿಸುತ್ತಿದ್ದರು. ಈ ಶಿಲ್ಪಗಳು ಸಾಮಾನ್ಯವಾಗಿ ಪ್ರಾಕೃತಿಕವಾದ ವಸ್ತುಗಳ ರಚನೆಗೆ ಸಾಮ್ಯವೆನಿಸುವಂತೆ ಇರುತ್ತಿದ್ದವು ಮತ್ತು ಸುಲಭವಾಗಿ ಒಂದೆಡೆಯಿಂದ ಮತ್ತೊಂದೆಡೆಗೆ (portable) ಒಯ್ಯುವ ಹಾಗಿರುತ್ತಿದ್ದವು. ಅಲ್ಲದೇ ಅಪಾರ ಕೌಶಲ್ಯಪೂರಿತವೂ ಆಗಿದ್ದವು.

 ಚಿತ್ರದಲ್ಲಿರುವ ಪ್ಯಾಲಿಯೋಲಿಥಿಕ್ ಕಾಲದ ಮಹಿಳೆಯ ಶಿಲ್ಪ ವಿಯೆನ್ನಾದ ಪ್ರಾಕೃತಿಕ ಇತಿಹಾಸ ವಸ್ತು ಸಂಗ್ರಹಾಲಯದಲ್ಲಿದೆ. ಇದಕ್ಕೆ Venus of Willendorf’  ಎಂದು ಹೆಸರಿಸಲಾಗಿದೆ. ಏಕೆಂದರೆ ಈ ಶಿಲ್ಪವು ಆಸ್ಟ್ರಿಯಾದ ವಿಲ್ಲೆಂಡಾರ್ಪ್ ಎಂಬ ಪ್ರದೇಶದಲ್ಲಿನ ಉತ್ಖತನದಲ್ಲಿ ದೊರೆತದ್ದಾಗಿದೆ. ಕ್ರಿ.ಪೂ ೨೫,೦೦೦ ದಿಂದ ಕ್ರಿ.ಪೂ ೨೧,೦೦೦ ದ ನಡುವಿನ ಶಿಲ್ಪ ಇದಿದ್ದಿರಬಹುದೆಂದು ಅಂದಾಜಿಸಲಾಗಿದೆ. ಈ ಶಿಲ್ಪ ೧೧.೫ ಸೆಂ. ಮೀ ಗಳಷ್ಟು ಎತ್ತರವಿದ್ದು ಆ ಕಾಲದ ಯಾವನೋ ಒಬ್ಬ ನುರಿತ ಶಿಲ್ಪಿಯಿಂದಲೇ ಇದು ತಯಾರಾಗಿರಬಹುದು. ಏಕೆಂದರೆ ಲೈಮ್‌ಸ್ಟೋನ್ ನಿಂದ ತಯಾರಾದ ಈ ಶಿಲ್ಪದಲ್ಲಿ ಕೆಲವು ಸೂಕ್ಷ್ಮ ಉಪಕರಣಗಳು ಅಂದರೆ ಚಾಕು ಇತ್ಯಾದಿಗಳನ್ನು ಬಳಸಲಾಗಿದ್ದು, ಕೆತ್ತನೆ ಪೂರ್ಣಗೊಂಡ ನಂತರ ಶಿಲ್ಪವನ್ನು ಉಜ್ಜಿ ಅದಕ್ಕೆ ಮೆರಗು ಕೊಡಲಾಗಿದೆ. ಇನ್ನುಳಿದಂತೆ ಈ ಶಿಲ್ಪವು ಮೂಲಭೂತವಾಗಿ ವೃತ್ತಾಕಾರಕ್ಕೆ ಹತ್ತಿರವಾದ ಅವಯವಗಳನ್ನು ಹೊಂದಿದೆ. ಈ ಶಿಲ್ಪದಲ್ಲಿರುವ ಮಹಿಳೆಯ ತಲೆ, ಸ್ತನಗಳು, ತೊಡೆ, ಹೊಟ್ಟೆ ಮತ್ತು ಸೊಂಟದ ಕೆಳಗಿನ ಭಾಗವು ಇದಕ್ಕೆ ಪುಷ್ಟಿ ನೀಡುವಂತಿದೆ. ಅಲ್ಲದೇ ಈ ಭಾಗಗಳೇ ಢಾಳಾಗಿ ತೋರುತ್ತದೆ. ಕಲಾವಿದನ ಈ ಮಾದರಿಯ ಕಲ್ಪನೆಯನ್ನು ನಾವು ಊಹಿಸಬಹುದೇ ಹೊರತು ಅದನ್ನು ಹೀಗೆಯೇ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಆದರೂ ಈ ಶಿಲ್ಪದ ಮೇಲಿನ ಅಧ್ಯಯನವು ಇದನ್ನು ಅಭಿವೃದ್ಧಿಯ ದೇವತೆ ಎಂದು ತರ್ಕಿಸಿದೆ. ಈ ಶಿಲ್ಪವನ್ನು ಇಂದಿನ ಕಲಾವಿದನ ಶಿಲ್ಪದೊಡನೆ ಹೋಲಿಸಿ ಅಂತಹ ಉತ್ತಮ ಕೆತ್ತನೆ ಇದಲ್ಲವೆಂದು ಭಾವಿಸಬಹುದಾದರೂ ಮಾನವನ ಮೊತ್ತ ಮೊದಲ ಪ್ರಯೋಗವೆಂದು ಹುಬ್ಬೇರಿಸಬಹುದು.     -ಸುಗಂಧ

ಕಲೆಯ ಅಗತ್ಯ ನಮಗೆ, ನಮ್ಮ ಭಾವನೆಗಳ ಅಭಿವ್ಯಕ್ತಿಯ ಸಂದರ್ಭದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ದೃಶ್ಯ ಕಲೆಯ ಇತಿಹಾಸದ ಪ್ರಶ್ನೆಗೆ ಬಂದಲ್ಲಿ ಕಲೆಯ ಇತಿಹಾಸದ ಕುರಿತಾದ ಪ್ರಜ್ಞೆಯು ಪುರಾತನ ಇಲ್ಲವೇ ನಂತರದ ಜನಾಂಗಗಳ ಸಂಸ್ಕೃತಿಯ ಸ್ಥೂಲವಾದ ಪರಿಚಯಕ್ಕೆ ಅತ್ಯವಶ್ಯ ಅಲ್ಲದೇ ಬರವಣಿಗೆಯ ಸಾಮಗ್ರಿಗಳು ಮತ್ತು ಆ ಕುರಿತಾದ ಕೌಶಲ್ಯ ಅಭಿವೃದ್ಧಿ ಹೊಂದಿರದ ಕಾಲದ ಜನಜೀವನದ ಚಿತ್ರಣವನ್ನೂ ಇವು ನೀಡುತ್ತವೆ.
ಈ ಎಲ್ಲಾ ಸಂಗತಿಗಳು ಒತ್ತಟ್ಟಿಗಿರಲಿ. ಕಲೆಯ ಕುರಿತು ಇರುವ ನಂಬಿಕೆಗಳಲ್ಲಿ ಮುಖ್ಯವಾದದ್ದೆಂದರೆ ಕಲೆ ಎನ್ನುವುದು ನಮ್ಮ ಭಾವನೆಗಳನ್ನು, ಆಸಕ್ತಿಗಳನ್ನು, ಯೋಚನೆಗಳನ್ನು ಹೊರಹಾಕುವ ಕಿಟಕಿ ಎಂಬುದು.
ಜಗದ್ವಿಖ್ಯಾತ ಚಿತ್ರ ಕಲಾವಿದ ವಿನ್ಸೆಂಟ್ ವ್ಯಾನ್ ಗೋ ನ ಈ ಚಿತ್ರವನ್ನು ಗಮನಿಸಿ.
ವಿನ್ಸೆಂಟ್ ವ್ಯಾನ್ ಗೋ, ಸ್ವಂತ ವ್ಯಕ್ತಿ ಚಿತ್ರ, ೧೮೮೮, ತೈಲ ವರ್ಣ ಚಿತ್ರ (೬೫.೫-೫೦.೫ ಸೆಂ.ಮೀ) ರಿಜ್ಷು ಮ್ಯೂಸಿಯಂ, ಆಮ್ಸ್ಟರ್ ಡ್ಯಾಮ್
ವ್ಯಾನ್ ಗೋ ಬಣ್ಣಗಳಿಂದ ಅದೆಷ್ಟರ ಮಟ್ಟಿಗೆ ಪ್ರಭಾವಿತನಾಗಿದ್ದ ಎಂಬುದನ್ನು ನಾವು ಈ ಚಿತ್ರ ನೋಡಿ ಊಹಿಸಿಕೊಳ್ಳಲು ಸಾಧ್ಯ. ಈ ಚಿತ್ರದಲ್ಲಿ ವ್ಯಾನ್ ಗೋ ತನ್ನನ್ನು ತಾನೇ ಬಿಡಿಸಿಕೊಂಡಿದ್ದಾನೆ. ಈ ಚಿತ್ರದಲ್ಲಿ ತಾನು ಬಿಡಿಸುತ್ತಿರುವ(ನಮಗೆ ಕಾಣುತ್ತಿಲ್ಲ) ಚಿತ್ರದ ಹಿಂಬಾಗದಲ್ಲಿ ಗುರುತಿಸಿಕೊಂಡಿದ್ದಾನೆ. ಆ ಚಿತ್ರ ನಮಗೆ ಕಾಣಿಸದಿದ್ದರೂ ಅದನ್ನು ಕೂಡ ವ್ಯಾನ್ ಗೋ ನ ಸ್ವಂತ ವ್ಯಕ್ತಿ ಚಿತ್ರ ಎಂದು ತರ್ಕಿಸಬಹುದು. ನಮಗೆ ಕಾಣುವ ಚಿತ್ರದಲ್ಲಿ ವ್ಯಾನ್ ಗೋ ನ ಕೈಯಲ್ಲಿ ಪ್ಯಾಲೆಟ್ ಮತ್ತು ಒಂದಿಷ್ಟು ಬ್ರಷ್ ಗಳಿವೆ. ಮತ್ತು ಆ ಬ್ರಷ್, ಪ್ಯಾಲೇಟ್‌ಗಳಿಗೆ ಮೆತ್ತಿಕೊಂಡಿರುವುದು ಈ ಚಿತ್ರಕ್ಕೆ ಬಳಸಿದ ಬಣ್ಣಗಳೇ ಎಂಬುದು ವಿಶೇಷ. ಪ್ಯಾಲೇಟ್‌ನ ಮಧ್ಯಕ್ಕೆ ಕೇಸರಿ ವರ್ಣವಿದ್ದು ಪ್ರಸ್ತುತ ಚಿತ್ರದ ಸರಿಸುಮಾರು ಮಧ್ಯದಲ್ಲಿ ಅಂದರೆ ವ್ಯಾನ್ ಗೋ ನ ಗಡ್ಡದ ಭಾಗದಲ್ಲಿ ಅದು ಬಳಕೆಯಾಗಿದೆ. ಅಲ್ಲದೇ ಇದೇ ಬಣ್ಣದಲ್ಲ್ಲಿ ವ್ಯಾನ್ ಗೋ ತಾನು ರಚಿಸುತ್ತಿರುವಂತೆ ತೋರಿಸಿಕೊಂಡ, ಚಿತ್ರದಲ್ಲಿ ಅವನೆದುರಿಗಿರುವ ಚಿತ್ರದ ಚೌಕಟ್ಟಿನ ಮೇಲೆ ತನ್ನ ಹೆಸರಾದ ವಿನ್ಸೆಂಟ್ ಮತ್ತು ಪ್ರಸ್ತುತ ಚಿತ್ರ ರಚಿಸಿದ ವರ್ಷವಾದ ೮೮ ನ್ನು ನಮೂದಿಸಿದ್ದಾನೆ. ಈ ಚಿತ್ರದಲ್ಲಿ ವ್ಯಾನ್ ಗೋ ಕೌಶಲ್ಯ ಸಹಿತವಾಗಿ ತನ್ನ ಅಭಿವ್ಯಕ್ತಿಯನ್ನು ಮಂಡಿಸಿದ್ದಾನೆ. ಈ ನಿಟ್ಟಿನಲ್ಲಿ ನಾವು ಕಲೆಯೆಂಬುದು ಮನೋರಂಜನೆಯ ಕೈಕರಣವೆಂದು ಗಣಿಸದೇ ಭಾವಾಭಿವ್ಯಕ್ತಿಯ ಮಾಧ್ಯಮವಾಗಿಯೂ ಗುರುತಿಸಬಹುದು- ಸುಗಂಧ                         

ಅರಳುವಿಕೆ. ಸಹಜತೆಗೆ ಇರುವ ಉಪಮೆ. ರಾಗವೂ ಹೀಗೆಯೇ ಅರಳಬೇಕಂತೆ ; ಪೂರ್ಣತ್ವಕ್ಕಾಗಿ. 
“ಅಕ್ಕ ಕೇಳವ್ವಾ ನಾನೊಂದು ಕನಸ ಕಂಡೆ’ ಅಕ್ಕಮಹಾದೇವಿಯ ವಚನ ಕೇಳಿದ ಕೂಡಲೇ ಜೈಪುರ್ ಅಟ್ರೌಲಿ ಘರಾನಾದ ಖ್ಯಾತಿ ಮಲ್ಲಿಕಾರ್ಜುನ ಮನ್ಸೂರ್ ಸ್ಮೃತಿ ಪಟಲದಲ್ಲಿ ಬಂದು ಹಾಡಲು ಆರಂಭಿಸುತ್ತಾರೆ. ವಚನ ಮತ್ತು ಸಂಗೀತ-ಎರಡಕ್ಕೂ ಏಕಕಾಲದಲ್ಲಿ ಒಂದು ತಾದಾತ್ಮ್ಯವನ್ನು ಬೆಸೆದ ಪ್ರಯತ್ನವಿದು. ಮನ್ಸೂರ್, ಸಂಗೀತಕ್ಕೆ ತಮ್ಮ ಬದುಕನ್ನೇ ತೇಯ್ದುಕೊಂಡವರು, ಗಂಧದಂತೆ. ಪರಿಮಳ ಹೊಮ್ಮಿ ನಾಡಿನ ಪ್ರತಿ ಮನೆಯ ಕಂಪೂ ಅವರೇ ಆದಾಗಲೂ ಮನ್ಸೂರರ ಮುಖದಲ್ಲಿ ಆ ಚೆಂದದ ಪೂರ್ಣತ್ವದ ನಗೆ ಮಾಸಿರಲಿಲ್ಲ. ಅವರೋ ಶಿಖರ, ಅವರ ಸಾಧನೆ ಆ ಶಿಖರಕ್ಕೆ ಮುಕುಟಪ್ರಾಯ.
ಇದೇ ಜೈಪುರ್ ಅಟ್ರೌಲಿ ಘರಾನಾವನ್ನು ಅಷ್ಟೇ ಸಮರ್ಥವಾಗಿ ತಮ್ಮದಾಗಿಸಿಕೊಂಡಿರುವ ಮನ್ಸೂರರ ಪುತ್ರ ರಾಜಶೇಖರ ಮನ್ಸೂರ್ ಇಲ್ಲಿ ಉಲ್ಲೇಖನೀಯರು. ರಾಜಶೇಖರ್ ಮನ್ಸೂರ್ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಪಾಠ ಮಾಡಿದವರು. ಪ್ರವೃತ್ತಿಯಲ್ಲಿ ಸಂಗೀತಗಾರ. ವೃತ್ತಿಗೆ ಕೊಟ್ಟಷ್ಟೇ ಆದ್ಯತೆಯನ್ನು ಪ್ರವೃತ್ತಿಗೂ ನೀಡಿರುವುದು ಧನಾತ್ಮಕ ಅಂಶ.
ಪರಂಪರೆಯನ್ನು ತನ್ನ ಪ್ರಯೋಗದ ಕುಲುಮೆಯ ಬಂಡವಾಳವನ್ನಾಗಿಸಿ ಹೊಸತನದಿಂದ ಹಾಡುವ ರಾಜಶೇಖರ ಮನ್ಸೂರರ ಬಗ್ಗೆ ಎರಡು ಮಾತು ಹೇಳಬೇಕು. ಷಷ್ಟ್ಯಾಬ್ದಿಯ ಸಂಭ್ರಮದಲ್ಲಿರುವ ಇವರು ದಕ್ಷಿಣ ಕರ್ನಾಟಕಕ್ಕೆ ಪರಿಚಿತರಾಗಿಯೂ ಅಪರಿಚಿತರಾಗಿರುವವರು. ಆದರೆ ಉತ್ತರ ಭಾರತಕ್ಕೆ ಅಪರಿಚಿತರಾಗಿಯೂ ತೀರಾ ಪರಿಚಿತರಾಗಿರುವವರು. ಒಂದು ಕಡೆ ಹಿತ್ತಲ ಮದ್ದಾದವರು ; ಮತ್ತೊಂದು ಕಡೆ ಪ್ರತಿಭೆಯಿಂದಲೇ ಮಾನ್ಯರಾದವರು.
ಸಜ್ಜನರು-ಸೌಜನ್ಯ-ಸಜ್ಜನಿಕೆ ಎಂದು ಹೇಳುವುದು ತೀರಾ ಕ್ಲೀಷೆ ಎನಿಸಿಬಿಟ್ಟಿದೆ.  ಆದರೆ ಬಹಳ ಸಹಜವಾಗಿ ಮಾನವೀಯ ವಾಗಿ ಪ್ರತಿಕ್ರಿಯಿಸುವ ರಾಜಶೇಖರ ಮನ್ಸೂರರರಿಗೆ ನಿಷ್ಠುರವಾಗಿ, ತಿಳಿಯದಿದ್ದನ್ನು “ಗೊತ್ತಿಲ್ಲ’ ಎಂದು ಹೇಳುವ ತಿಳಿವಿದೆ.
ಇಪ್ಪತ್ತು ವರ್ಷ ತಂದೆಯಲ್ಲಿ ತರಬೇತಿ ಪಡೆದ ರಾಜಶೇಖರ ನಂತರ ಕಳೆದ ೨೫ ವರ್ಷಗಳಲ್ಲಿ ಹಲವು ರಾಗಗಳ ಮೂಲ ಸತ್ವವನ್ನೇ ಅರಿತುಕೊಳ್ಳುವತ್ತ ಪ್ರಯತ್ನಿಸಿದ್ದಾರೆ. “ಇನ್ನೂ ಕಲಿಯುತ್ತಿದ್ದೇನೆ, ಸಂಗೀತದ ಎಲ್ಲವೂ ಅರ್ಥವಾಗಿಲ್ಲ. ಇನ್ನೂ ಅರಿತು ಕೊಳ್ಳುವ ಕ್ರಿಯೆ ಸಾಗಿದೆ. ಪೂರ್ಣ ಅರಿತಿಲ್ಲ’ ಎಂದು ಹೇಳುತ್ತಾರೆ. ಸಂದರ್ಶನದ ಉಳಿದ ಭಾಗ ಇಂತಿದೆ :
* ಕಛೇರಿಗಳು ಹೇಗೆ ಸಾಗಿವೆ? ಕರ್ನಾಟಕದಲ್ಲೇ ನಿಮ್ಮ ಪರಿಚಯ ಇನ್ನೂ ಆಗಿಲ್ವೇ?
ಉತ್ತರ ಭಾರತದಲ್ಲಿ ಬಹಳ ಕಾರ್ಯಕ್ರಮ ನೀಡಿದ್ದೇನೆ. ದಿಲ್ಲಿ, ಮುಂಬಯಿ, ಕೋಲ್ಕತ್ತಾ, ಅಹಮದಾಬಾದ್ ಇತ್ಯಾದಿ. ಇತ್ತೀಚಿನ ಕೋಮುಗಲಭೆ ಸಂದರ್ಭದಲ್ಲೂ ಕಾರ್ಯಕ್ರಮ ನೀಡಿದ್ದು ವಿಶೇಷವೆನಿಸಿದೆ. ಕರ್ನಾಟಕದಲ್ಲಿ ಧಾರವಾಡ, ಹುಬ್ಬಳ್ಳಿಯಲ್ಲಿ ಪರಿಚಯವಾಗಿದ್ದೇನೆ. ದಕ್ಷಿಣ ಕರ್ನಾಟಕದಲ್ಲಿ ಬೇಡಿಕೆಯಿಲ್ಲ. ನನಗೂ ಕಾರಣ ಗೊತ್ತಿಲ್ಲ ; ಆ ಬಗ್ಗೆ ಚಿಂತೆನೂ ಮಾಡಿಲ್ಲ. ಉತ್ತರ ಭಾರತದಲ್ಲಿ ಹೆಸರು ಮಾಡಿದ್ದರೂ ನನ್ನ ತಂದೆಯೂ ಅರವತ್ತರ ನಂತರವೇ ಕರ್ನಾಟಕದಲ್ಲಿ ಪ್ರಸಿದ್ಧಿಗೆ ಬಂದವರು.
* ಹಾಗಾದರೆ ಈಗ ನಿಮಗೂ ಅರವತ್ತು ಆಯಿತಲ್ಲ, ಪ್ರಸಿದ್ಧಿಗೆ ಬರುವಿರಾ?
ಅದಕ್ಕಾಗಿ ವಿಶೇಷ ಪ್ರಯತ್ನಗಳನ್ನು ಮಾಡಲಾರೆ. ನನ್ನಷ್ಟಕ್ಕೇ ಹಾಡುವುದಷ್ಟೇ ಕೆಲಸ.  ಇದೇನೂ ಕೊರತೆ ಎನ್ನಿಸುತ್ತಿಲ್ಲ.
* ಒಂದು ಸಂಗೀತ ಕಛೇರಿಯನ್ನು ವ್ಯಾಖ್ಯಾನಿಸಿ..
ಪ್ರತಿ ಕಛೇರಿಗೂ ಬಹಳ ಮುಕ್ತ ಮನಸ್ಸಿನಿಂದ ಸಾಗುತ್ತೇನೆ. ಸಾಧಾರಣವಾಗಿ ರಾಗಗಳನ್ನು ನಿಗದಿಪಡಿಸಿಕೊಂಡು ಅಭ್ಯಾಸಮಾಡಿ ಹೋಗುವುದಿಲ್ಲ. ನನ್ನ ಗುರುವೂ ಹೇಳಿದಂತೆ ಆ ದಿನದ “ಮೂಡ್’ ಮೇಲೆ ರಾಗಗಳನ್ನು ಪ್ರಸ್ತುತಪಡಿಸುತ್ತೇನೆ. ಉತ್ತರ ಭಾರತದಲ್ಲಿ “ಫರಮಾಹಿಶ್’ ಇರುತ್ತೆ. ಸಂಗೀತ ಪ್ರೇಮಿಗಳು ಇಂತಹ ರಾಗ ಹಾಡಿ ಎಂದು ಕೋರುತ್ತಾರೆ. ಅಂತಹವುಗಳಿಗೆ ಮನ್ನಣೆ ನೀಡುತ್ತೇನೆ. ಜನರ ಪ್ರತಿಕ್ರಿಯೆಗೆ ತಕ್ಕಂತೆ ಹಾಡದಿದ್ದರೆ ಸರಿ ಎನಿಸುವುದಿಲ್ಲ. ಜನಪ್ರಿಯತೆಗಾಗಿ ನಾನು ಹಾಡೋದಿಲ್ಲ.
* ತಂದೆಯಂತೆ ವಚನ ಹಾಡಲಿಕ್ಕೆ ಏಕೆ ಪ್ರಯತ್ನಿಸಿಲ್ಲ?
ಇಲ್ಲ, ಹಾಗೇನೂ ನಿರ್ಬಂಧವಿಲ್ಲ. ವಚನವನ್ನೂ ಹಾಡುತ್ತೇನೆ. ಆದರೆ ನಾನು “ಖ್ಯಾಲ್’ ಗೆ ಅರ್ಪಿಸಿಕೊಂಡುಬಿಟ್ಟಿದ್ದೇನೆ. ಅದನ್ನೇ ಇನ್ನಷ್ಟು ಇನ್ನಷ್ಟು ಅಂತರ್ಗತಗೊಳಿಸಿಕೊಳ್ಳುವುದು ನನ್ನ ಸಾಧನೆಯ ಹಾದಿ. ಅದರಲ್ಲೇ ಪರಿಪೂರ್ಣನಾಗಬೇಕೆಂಬ ಇಚ್ಛೆಯೂ ನನ್ನದು. ಹಾಗಾಗಿ ಅದರಲ್ಲೇ ತಲ್ಲೀನನಾಗಿದ್ದೇನೆ. ಆದರೆ ಹಾಡಬಾರದೆಂಬುದಾಗಲೀ ಅಥವಾ ಶಾಸ್ತ್ರೀಯ ಗಾಯಕರು ವಚನ, ದಾಸರ ಪದ ಹಾಡುವುದು ತಪ್ಪು ಎಂಬ ಅಭಿಪ್ರಾಯವಾಗಲೀ ನನ್ನದಲ್ಲ.
* ಶಾಸ್ತ್ರೀಯ ಸಂಗೀತಕ್ಕೆ ಕನ್ನಡದ ಕೃತಿಗಳನ್ನು ಪರಿಚಯಿಸದಿದ್ದರೆ ಕನ್ನಡಕ್ಕೇ ಕೊರತೆ ಅಲ್ಲವೇ?
ಹಿಂದೂಸ್ತಾನಿ ಸಂಗೀತಕ್ಕೆ ಎಳೆ ಬೇಕು. ಅಂತಹ ಕಾವ್ಯದ ಎಳೆ ಕನ್ನಡದಲ್ಲಿ ಅಷ್ಟಿಲ್ಲ. ಶಾಸ್ತ್ರೀಯ ಮಟ್ಟುಗಳಿಂದ ಕೂಡಿದ ಶಾಸ್ತ್ರೋಕ್ತ ರಚನೆ(ಬಂದಿಶ್)ಗಳನ್ನು ಉತ್ತರ ಭಾರತದ ಗಾಯಕರೇ ಕಟ್ಟಿಕೊಟ್ಟಿದ್ದಾರೆ. ಅಂತಹ ರಚನೆ ನಮ್ಮಲ್ಲಿ ಇಲ್ಲ. ಸಂಗೀತ ದೃಷ್ಟಿಕೋನಕ್ಕೆ ಹೊಂದುವಂತಿರಬೇಕು. ಅಂತಹ ರಚನೆಗಳೂ ಕನ್ನಡದಲ್ಲೂ ಸಿಕ್ಕರೆ ನಾನು ಖಂಡಿತಾ ಹಾಡುತ್ತೇನೆ. ಕವಿ ಹೃದಯಿಗಳು ಸಂಗೀತದ ಅಗತ್ಯವನ್ನೂ ಅರಿತು ರಚಿಸಿದರೆ ಅತ್ಯಂತ ಸೂಕ್ತ. ಅಂತಹವು ರಚನೆಯಾದರೆ ಮೊದಲು ಖುಷಿ ಪಡುವವನೇ ನಾನು.
* ಸಂಗೀತಗಾರರು, ಸಾಹಿತಿಗಳು, ಕಲಾವಿದರೆಲ್ಲಾ ಸಾಮಾಜಿಕ ಸಂದರ್ಭಗಳಿಂದ(ಸಾಮಾಜಿಕ ತಲ್ಲಣ ಇತ್ಯಾದಿ) ಹೊರ ಬರುವುದಿಲ್ಲ ಏಕೆ? ದಂತಗೋಪುರದಲ್ಲೇ ಯಾಕೆ ಉಳಿಯುತ್ತಾರೆ?
ಸಾಮಾಜಿಕ ಸಂದರ್ಭಗಳಿಗೆ ಎಲ್ಲರೂ ಪ್ರತಿಕ್ರಿಯಿಸಬೇಕು. ಸಮಾಜದೊಳಗೆ ಬದುಕುವುದರಿಂದ ಅಲ್ಲಿನ ತಲ್ಲಣಗಳಿಗೆ ಸ್ಪಂದಿಸದಿದ್ದರೆ ಕಷ್ಟ. ನನಗೆ ತಿಳಿದಂತೆ ಹಲವು ಸನ್ನಿವೇಶಗಳಲ್ಲಿ ಕೆಲವರು ಸ್ಪಂದಿಸಿದ್ದಾರೆ. ಆದರೆ ಅವರ ಪ್ರಮಾಣ ಕಡಿಮೆ ಇರುವುದು ನಿಜ. ಸಮಾಜವೇ ಅವನಿಗೆ ಮಾನ್ಯತೆ ನೀಡುವಾಗ ಅದರ ಸಂದರ್ಭಗಳಿಗೆ ಪ್ರತಿಕ್ರಿಯಿಸದಿದ್ದರೆ ತಪ್ಪು. ಇದು ನನ್ನ ನಿಲುವು.
* ಪ್ರಜ್ಞಾವಂತಿಕೆ ಸಂಗೀತ ಆಸ್ವಾದನೆಗೆ ಧಕ್ಕೆಯಾಗುತ್ತಾ?
ಒಂದು ಅರ್ಥದಲ್ಲಿ ಈ ಮಾತು ನಿಜ. ಪ್ರಜ್ಞಾವಂತಿಕೆ ಬಳಕೆಯ ಔಚಿತ್ಯ ಅರಿವಿರಬೇಕು. ನಾನು ಸಂಗೀತ ಕಲಿದ್ದು ವಿಶ್ಲೇಷಣೆಗಳ ಮೂಲಕವಲ್ಲ. ನನ್ನ ತಂದೆ ರಾಗಗಳೊಳಗೆ ಹೋಗಿ ಹಾಡುತ್ತಿದ್ದರಲ್ಲ. ಅದೇ ಅಚ್ಚರಿ ಎನಿಸುತ್ತಿತ್ತು. ಅವರೇ ರಾಗವನ್ನು ಸೃಷ್ಟಿಸುತ್ತಿದ್ದರು ಎನಿಸುತ್ತಿತ್ತು ನನಗೆ. ನನ್ನ ನೆಲೆಯಲ್ಲಿ ಅದನ್ನು ಅರ್ಥ ಮಾಡಿಕೊಳ್ಳುತ್ತಾ ಹೋಗಿದ್ದೇನೆ. ವಿದ್ವತ್, ತಂತ್ರಗಳ ಬಗ್ಗೆ ಸ್ವರ ಹಚ್ಚುವಾಗಲೂ ಗಮನ ಕೊಡುವವರನ್ನು ನೋಡಿದ್ದೇನೆ. ಆದರೆ ಅಲ್ಲಿ ಹುಟ್ಟುವ ಆನಂದವನ್ನು ಅನುಭವಿಸುವುದು ತಿಳಿದಿರುವುದಿಲ್ಲ.
ಸಂಗೀತವೇ ಸುಂದರ. ಅದನ್ನು ಸುಂದರಗೊಳಿಸಲಿಕ್ಕೆ ಆಗದು. ಸೌಂದರ್ಯವನ್ನೇ ಅನುಭವಿಸುವುದಷ್ಟೇ ನಮ್ಮ ಕೆಲಸ. ಗುಲಾಬಿ ಹೂವೇ ಸುಂದರ. ಅದನ್ನು ಸುಂದರ ಮಾಡಲು ಸಾಧ್ಯವೇ? ಹಾಗೆಯೇ ಸಂಗೀತದ ಸೌಂದರ್ಯೀಕರಣಕ್ಕೆ ಯಾವ ಪ್ರಸಾಧನವೂ ನಮ್ಮಲ್ಲಿ ಇಲ್ಲ. ಅದಕ್ಕೆ ತಲ್ಲೀನತೆ-ತಾದಾತ್ಮ್ಯ ಮುಖ್ಯ. ನಮ್ಮ ಮನೋಧರ್ಮವೂ ಅಷ್ಟೇ ಮುಖ್ಯ.
* ಸಂಗೀತಾನುಭವದ ವ್ಯಾಖ್ಯಾನ?
ನನಗನ್ನಿಸೋದು ಒಂದು ಸಂಗೀತ ಕಛೇರಿ ಆನಂದವನ್ನು ಉಕ್ಕಿಸಬೇಕು. ಅದು ಮನದೊಳಗಿನ ಆನಂದ. ರಾಗದ ಸಂಚಾರ ಮುಗಿದ ಮೇಲೂ ನಮ್ಮೊಳಗೆ ಅದರ ಗುನುಗು ಸಂಚರಿಸುತ್ತಲೇ ಇರಬೇಕು. ಅದು ಒಂದು ರೀತಿಯಲ್ಲಿ ಮನಮುದ್ರೆಯಲ್ಲಿ ಸ್ಟೋರ್ ಆಗುವ ಬಗೆ. ನೆನಪಾದಾಗಲೆಲ್ಲಾ ರಾಗ ರಂಜಿಸಿ ಆ ಸಂಗೀತ ಕಛೇರಿಯ ಅನುಭವವನ್ನೇ ನೀಡಬಲ್ಲದು. ಸವಿ ನೆನಪು ಎಂದಿಟ್ಟುಕೊಳ್ಳಿ. ಅದು ಶ್ರೇಷ್ಠ ಸಂಗೀತ. ಪ್ರತಿ ಬಾರಿ ಸ್ಮೃತಿಪಟಲದಲ್ಲಿ ಹಾದುಹೋಗುವಾಗಲೂ ಅದೇ ಜೀವಂತಿಕೆಯಿರಲು ಸಾಧ್ಯ.
* ಕಛೇರಿಗೆ ಜೀವಂತಿಕೆ ತಂದುಕೊಡುವುದು ಹೇಗೆ?
ಪ್ರತಿ ಸಂಗೀತ ಕಛೇರಿಯೂ “ಘಟಿಸುತ್ತದೆ’. ಅದೊಂದು ಘಟನೆ ಮಾದರಿಯಲ್ಲಿ. ಪೂರ್ವನಿಯೋಜಿತವಾಗಿರುವುದಿಲ್ಲ. ಸಂಗೀತಗಾರನೂ ಹಿಂದಿನ ಕಛೇರಿಯಲ್ಲೇ ಹಾಡಿದ ರಾಗಗಳನ್ನು ಮತ್ತೆ ಹಾಡುತ್ತಿರಬಹುದು. ಆದರೆ ಪುನರ್ ನಿರ್ಮಾಣ. ಆ ರಾಗವನ್ನೂ ನಾನೂ ಮತ್ತೊಮ್ಮೆ ಅನುಭವಿಸುತ್ತೇನೆ. ಹಾಗೆಯೇ ಸಂಗೀತ ಪ್ರೇಮಿಗಳೂ. ಎಂದಿಗೂ ಥೇಟ್ ಹಿಂದಿನ ಕಛೇರಿಯಂತೆ ಹಾಡಲಾಗದು. ಹಾಗಾಗಿಯೇ ಅದನ್ನು ಘಟಿಸುವುದು ಎಂಬುದೇ ನನ್ನ ಅಭಿಪ್ರಾಯ.
* ಇಂಗ್ಲಿಷ್ ಪ್ರೊಫೆಸರ್ ಆದ ನಿಮ್ಮ ದೃಷ್ಟಿಯಲ್ಲಿ ಜಾಗತೀಕರಣ-ಭಾರತೀಯ ಪರಂಪರೆ ಇತ್ಯಾದಿ ಏನನ್ನಿಸುತ್ತದೆ?
ಪ್ರಸಾರ ಭಾರತಿ(ಆಕಾಶವಾಣಿ)ಯಂತಹ ಸಂಸ್ಥೆಗಳೇ ಸಂಗೀತ ಹಾಡೋ ಕಲಾವಿದರೇ ಅವರ ಕಾರ್ಯಕ್ರಮದ ಪ್ರಾಯೋಜಕರನ್ನು ಹುಡುಕಿಕೊಂಡು ಬನ್ನಿ ಎಂದು ಹೇಳುವ ಸ್ಥಿತಿ ಎಲ್ಲವನೂ ಬಿಂಬಿಸಬಲ್ಲದು. ಕಲೆಯನ್ನು ವ್ಯಾಪಾರೀಕರಣಗೊಳಿಸುವುದು ಸಲ್ಲ. ಆ ದೃಷ್ಟಿಯಲ್ಲಿ ರಾಜಿಯಾಗಲೀ, ಹೊಂದಾಣಿಕೆಯಾಗಲೀ ಅತ್ಯಂತ ಅಪಾಯಕರ.  ಪರಂಪರೆ ಬಗ್ಗೆ ಮಾತಾಡುವುದನ್ನು ಕಲಿತಿದ್ದೇವೆಯೇ ವಿನಾ ನಿಜವಾದ ಕಾಳಜಿಯನ್ನು ರೂಢಿಸಿಕೊಂಡಿಲ್ಲ. ಹಾಗಾಗಿ ಪರಂಪರೆಯನ್ನು ಉಳಿಸಿಕೊಳ್ಳುವ ನಮ್ಮ ಪ್ರಯತ್ನವೂ ಕಸುವಿನಿಂದ ಕೂಡಿಲ್ಲ ಎನಿಸುತ್ತದೆ.
* ದಿನೇ ದಿನೇ ಭಾರತೀಯ ಸಂಗೀತ, ಕಲೆಯತ್ತ ಯವಜನತೆ ಆಸಕ್ತಿ ತೋರುತ್ತಿದ್ದಾರಲ್ಲ?
ಇರಬಹುದು. ಆದರೆ ಆ ಮಕ್ಕಳು ಪರಂಪರೆಯ ಬಗ್ಗೆ ನಿಜವಾದ ಕಾಳಜಿ ಮೂಡಿಸಿಕೊಳ್ಳಲು ಹೋಗುತ್ತಿದ್ದಾರೆಯೇ? ಇಲ್ಲ. ಅವರಿಗೆ ಡಿಗ್ರಿ ಬೇಕು. ಇದು ಸಂಗೀತಕದ ಬಗ್ಗೆ ಮಾಹಿತಿ ನೀಡುತ್ತದೆಯೇ ಹೊರತು ಸಂಗೀತಗಾರರಾಗಿ ರೂಪಿಸುವುದಿಲ್ಲ.   ವಿಶ್ವವಿದ್ಯಾಲಯಗಳೂ ಸಂಗೀತ ಪದವಿ ನೀಡುತ್ತಿವೆ. ಅಲ್ಲಿ ಪಿಎಚ್‌ಡಿ ಮಾಡಿದವರು ಉಪನ್ಯಾಸಕರು. ಅವರಿಗೆ eನ ಇದೆ, ಆದರೆ ಅನುಭವವಿಲ್ಲ. ಅನುಭವವಿರದೇ ಒಂದು ಪರಂಪರೆಯನ್ನು ಹರಿಸಲು ಸಾಧ್ಯವಾಗದು. ಸಂಗೀತ ಸಾಧಕರನ್ನು ಅತಿಥಿ ಉಪನ್ಯಾಸಕರ ರೀತಿಯಲ್ಲಿ ಬಳಸಿಕೊಳ್ಳುವ “ಪರಂಪರೆ’ ನಮ್ಮಲ್ಲಿ ಜೀವಂತವಾಗಬೇಕು. ಸಂಗೀತವೂ ವೃದ್ಧಿ ; ಪರಂಪರೆಗೂ ನವಕಳೆ.
* ಭಾರತೀಯ ಸಂಗೀತದ ಅಂತಃಶಕ್ತಿ ಆಧ್ಯಾತ್ಮವೇ? ಆದರಿಂದ ವ್ಯಾಪಾರೀಕರಣವಾಗುತ್ತಿರುವ ಆತಂಕ ಕುರಿತು?
ಹೌದು. ಆದರೆ ಹಿಂದೆ ಪೋಷಣೆಯ ಸ್ಥಾನ ರಾಜರ ಆಸ್ಥಾನವಾದರೆ, ಪ್ರದರ್ಶನ ಸ್ಥಾನ ದೇವಸ್ಥಾನ-ಗುಡಿ-ಗುಂಡಾರಗಳು. ಇಂದು ಆ ಎರಡೂ ಸ್ಥಾನಗಳೂ ಬರಿದಾಗಿವೆ. ಶಾಹು ಮಹಾರಾಜ್ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಯಾವಾಗಲೂ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರು. ಇಂತಹ ಉದಾಹರಣೆ ಬೇಕಾದಷ್ಟಿವೆ. ಈಗ ನಾವು ಪುನಃ ಮಸೀದಿ, ದೇವಸ್ಥಾನ, ಗುಡಿ-ಗುಂಡಾರಗಳನ್ನು ಸಾಂಸ್ಕೃತಿಕ ಕಲೆಯ ಸ್ಥಾನವಾಗಿ ಮಾರ್ಪಡಿಸಿದರೆ ಸಂಸ್ಕೃತಿ ಹಾಗೂ ಪರಂಪರೆ ಎರಡೂ ಏಕಕಾಲದಲ್ಲಿ ಪುನರುಜ್ಜೀವನಗೊಂಡೀತು. ಸಮಾಜದ ಸಹಕಾರದ ನಡುವೆ ಈ ಕೆಲಸವನ್ನು ನಾವು ಮೊದಲು ಮಾಡಬೇಕು. 
* ಒಂದು ರಾಗ ಪೂರ್ಣಗೊಳ್ಳುವುದು ಅಥವಾ ಪೂರ್ಣತ್ವ ಪಡೆಯುವುದು ಯಾವಾಗ? 
ಒಂದು ರಾಗದ ಗಾಯನ ನಮಗೆ ಆ ರಾಗದ ದರ್ಶನ ನೀಡುವಂತಾದಾರೆ ಪೂರ್ಣತ್ವ ಪಡೆದಂತೆ. ಕಣ್ಣಿನ ಮುಂದೆ ಮೂಡುವುದು ಎಂಬ ಮಾತಿದೆ. ಹಾಗೆಯೇ ರಾಗ ಕಣ್ಣೆದುರು ನಿಂತಂತೆ ಆಗಬೇಕು. ಈ ಮಾತನ್ನು ಶಬ್ದಾರ್ಥ ಮಾಡಬಾರದು. ಭಾವಾರ್ಥ ಮಾತ್ರ ತಿಳಿಯಬೇಕು. ನಮ್ಮೊಳಗೆ ಆ ರಾಗದ ಸಂಚಾರ ದಿವ್ಯಾನುಭವ ನೀಡಬೇಕು. ರಾಗ, ಜೀವಸ್ವರದಿಂದ ಪ್ರಭಾವಿತವಾಗಬೇಕು. ಅದು ರಾಗದ ಪೂರ್ಣತ್ವ. ಮುಂಜಾನೆಗೆ ಮಿಯಾ ಕಿ ತೋಡಿ, ಆಹಿರ್ ಭೈರವ್, ಸಂಜೆಗೆ ಪುರಿಯಾ, ಪೂರ್ವ, ಬಿಹಾಗ್ ನನಗೆ ಅತಿ ಸಮೀಪದ್ದು.
* ನಿಮ್ಮ ತಂದೆಯ ಒಂದು ಒಳ್ಳೆಗುಣ ಮತ್ತು ಕೆಟ್ಟಗುಣ?
ತಂದೆ ಎಲ್ಲರನ್ನೂ ಹೊಗಳುತ್ತಿದ್ದರು, ಪ್ರೋತ್ಸಾಹಿಸುತ್ತಿದ್ದರು. ಇದೇ ಒಳ್ಳೆಯದು ಮತ್ತು ಕೆಟ್ಟದೂ ಸಹ. ಎಲ್ಲರನ್ನೂ ಪ್ರಶಂಸೆ ಮಾಡುವುದು ಅಷ್ಟೊಂದು ಉಚಿತವಲ್ಲ. ಕಾರಣ, ಸರಿಯಿಲ್ಲದ್ದನ್ನೂ ಸರಿಯಿದೆ ಎಂದು ಪ್ರಶಂಸೆ ಮಾಡುವಾಗ ಯಾರದೋ ಉಚಿತವಲ್ಲದ ಗುಣವನ್ನೂ ಹೊಗಳಿದಂತೆ ಅನಿಸುವುದಿಲ್ಲವೇ?
* ಗುರುಕುಲ ಸಂಗೀತ ಪದ್ಧತಿ ಜೀವಂತಗೊಳ್ಳುವುದೆ?
ಜೀವಂತಗೊಳಿಸಬೇಕು. ಕಾರ್ಪೋರೇಟ್ ಸಂಸ್ಥೆಗಳು, ಶ್ರೀಮಂತರು “ಬ್ಯಾಕ್‌ಡ್ರಾಪ್’ ಗಳಾಗಿ ಗುರುಕುಲವನ್ನು ಸ್ಥಾಪಿಸಬೇಕು. ಯಾವುದಕ್ಕೂ ಹಸ್ತಕ್ಷೇಪ ಮಾಡದೇ ಸಂಸ್ಕೃತಿಯನ್ನು ಉಳಿಸುವ-ಬೆಳೆಸುವ ಕಾರ್ಯ ಮಾಡಬೇಕು. ಅದಾದರೆ ಸಾಧ್ಯ.
ಹೀಗೆ ತಮ್ಮ ಅನುಭವಗಳನ್ನು ತೋಡಿಕೊಳ್ಳುವ ರಾಜಶೇಖರ ಮನ್ಸೂರರ  ಸೋದರಿಯರ ಪೈಕಿ ನೀಲಾ ಕೊಡ್ಲಿ ಸಂಗೀತ ಪ್ರಪಂಚಕ್ಕೆ ಬರುತ್ತಿರುವವರು. ಜತೆಗೆ ಪ್ರಿಯದರ್ಶಿ ಕುಲಕರ್ಣಿ ಶಿಷ್ಯೆ. ಉಳಿದಂತೆ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಸಂಗೀತ ಕಲಿಯುವಂತೆ ಒತ್ತಾಯಿಸಿಲ್ಲ.  ಹಾಡುತ್ತಿರುವಾಗ ಯಾರಾದರೂ ಒಂದಷ್ಟು ರಿಲೀಫ್ ಎನಿಸಿ “ಹಾಯ್’ ಎಂದೆನಿಸಿದರೆ ಇವರಿಗೂ “ಹಾಯ್’ ಅನಿಸುತ್ತದೆ. ಇದು ರಾಗಕ್ಕೆ ಸಿಕ್ಕ ದರ್ಶನ, ಪರಿಶ್ರಮಕ್ಕೆ ಸಿಕ್ಕ ಫಲ. ಪರಂಪರೆಯ ಅಂತಃಶಕ್ತಿ ಕೂಡ.

( ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಈ ಹಿಂದೆ ಪ್ರಕಟವಾದ ಲೇಖನ. ನನ್ನ ಸಂಗ್ರಹದಿಂದ ಇದನ್ನು ಇಲ್ಲಿ ಹಾಕಿದ್ದೇನೆ. ಇಲ್ಲಿನ ಬಹಳಷ್ಟು ಅಂಶಗಳು ಚರ್ಚೆಗೀಡಾಗುವಂಥದ್ದು ಮತ್ತು ಬಹಳ ವಿಶೇಷವೆನಿಸುವಂಥದ್ದು. ಅದಕ್ಕೇ ಇಲ್ಲಿ ನೀಡಲಾಗಿದೆ. ಅಭಿಪ್ರಾಯ ತಿಳಿಸಬಹುದು-ಸುಗಂಧ)

ವಿಮರ್ಶೆಯ ಅಗತ್ಯವಿಲ್ಲ ಎನಿಸುತ್ತೆ, ಕೆಲವೊಮ್ಮೆ. ಆದರೆ ವಿಮರ್ಶೆ ಮಾಡುವವರು ಕಲಾವಿದ ಮತ್ತು ಕೇಳುಗರ ನಡುವಿನ ಕೊಂಡಿಯಾದದ್ದರಿಂದ ಯಾಕಿರಬಾರದ್ದೂ ಎನಿಸುತ್ತೆ ಮತ್ತೊಮ್ಮೆ. ಆದರೆ ಯಾರೇ ಆಗಲೀ, ಹೊಸ ಪ್ರಯತ್ನಕ್ಕೆ ಹುರುಪು ತುಂಬುವವರು ಇರಬೇಕು. “ಇಗೊ’ ಅಡ್ಡ ಬಾರದಿದ್ದರೆ ಸಾಕು.
ಚಂದ್ರಶೇಖರ

modern-art-n.jpg 

ಬಹಳ ದಿನಗಳಿಂದ ನನಗನ್ನಿಸುತ್ತಿರುವ ಅಭಿಪ್ರಾಯವಿದು. ಅಮೂರ್ತ ಕಲೆಗಳ ವಿಮರ್ಶೆ ಬಗ್ಗೆ. ಒಟ್ಟೂ ಇಲ್ಲಿನ ಪ್ರಯತ್ನದ ಅರ್ಥಪೂರ್ಣತೆ ಎಲ್ಲಿ ಸಾಕಾರಗೊಳ್ಳಬಲ್ಲದು ಎಂಬುದೇ ನಿಗೂಢ.
ಸಂಗೀತದ ವಿಷಯವನ್ನೇ ತೆಗೆದುಕೊಳ್ಳೋಣ. ಇಂದು ಸದಾ ವಿಮರ್ಶೆ ಹಾಗೂ ವಿಮರ್ಶಕರ ಅಡ್ಡಕತ್ತರಿಗೆ ಸಿಲುಕಿ ನಲುಗುತ್ತಿರುವ ಕಲೆಯ ಮುಖ್ಯ ಕ್ಷೇತ್ರವೆಂದರೆ ಸಂಗೀತ ಹಾಗೂ ನೃತ್ಯ. ನಂತರ ಚಿತ್ರಕಲೆಯದ್ದು.

ವಿಮರ್ಶಕರೆಲ್ಲಾ ಚಾಟಿ ಹಿಡಿದು ನಿಂತುಬಿಟ್ಟಿದ್ದಾರೆ. ಮಾತೆತ್ತಿದರೆ ಅದನ್ನು ಬೀಸುವುದೇ. ಅದಕ್ಕಾಗಿ ಕಲಾವಿದ ವರ್ಗದಲ್ಲೂ ಕೆಲಪಾಲು ವಿಮರ್ಶಕರನ್ನು ಓಲೈಸುವ ನೆಲೆಗೂ ತಲುಪಿರುವುದು ಸುಳ್ಳಲ್ಲ. ಕೆಲ ವಿಮರ್ಶಕರು ಅದನ್ನೇ ಗುತ್ತಿಗೆ ಹಿಡಿದಿದ್ದಾರೆ. ಸಾರ್ವಭೌಮರಾಗಿ ಮೆರೆಯುವ ದಿಸೆಯಲ್ಲಿ ವಿಮರ್ಶಕರ ಪ್ರಯತ್ನ ಮೇರೆ ಮೀರುತ್ತಿದ್ದರೆ, ಕಲಾವಿದರು ಸೋಲುತ್ತಿದ್ದಾರೆ. ವಿಮರ್ಶಕರನ್ನು ಓಲೈಸುವುದು ಅಥವಾ ವಿಮರ್ಶಕರನ್ನು ನಿರ್ಲಕ್ಷ್ಯಿಸಿ ಸಂಗೀತ ಸಭಾಗಳಿಂದ ಅವಗಣನೆಗೆ ಗುರಿಯಾಗುವುದು-ಎರಡೇ ಹಾದಿ ಕಲಾವಿದರಿಗೆ.

ಮೂಲಭೂತ ಪ್ರಶ್ನೆಯೆಂದರೆ ಒಂದು ಅಮೂರ್ತ ಕಲೆಯನ್ನು ವಿಮರ್ಶೆ ಯಾವ ದಿಸೆಯಲ್ಲಿ ಸೆರೆ ಹಿಡಿಯಬಲ್ಲದು ಎಂಬುದು. ಪಂಡಿತ್ ಮಲ್ಲಿಕಾರ್ಜುನ ಮನ್ಸೂರರ ರಾಗದ ಆಲಾಪನೆಯನ್ನೋ, ಚೀಜ್‌ನ್ನು ಪ್ರಸ್ತುತ ಪಡಿಸುವ ಮಾದರಿಯನ್ನೋ ವಿಮರ್ಶೆ ಹಿಡಿದುಕೊಡಲಾರದು. ಇದೇ ಮಾತು ಎಲ್ಲದಕ್ಕೂ ಅನ್ವಯ. ಒಂದು ವರ್ಣದ ನಿರೂಪಣೆಯನ್ನು ಪದಗಳಲ್ಲಿ ತುಂಬಿಕೊಡಲು ಸಾಧ್ಯವೇ? ಸಮುದ್ರವನ್ನು ಒಂದು ಬೊಗಸೆಯಲ್ಲಿ ಹಿಡಿಯುವ ಪ್ರಯತ್ನ ಸಾಂಕೇತಿಕವೆನಿಸಬಲ್ಲದು. ಆದರೆ ಒಂದು ಸಂಗೀತದ ಕಛೇರಿಯ ಸೊಬಗನ್ನು ಹೀಗೆ ಸಾಂಕೇತಿಸಲು ಹೊರಡುವುದು ಸಾಧುವಲ್ಲ ಎಂಬುದು ನನ್ನ ಅಭಿಪ್ರಾಯ.

ಒಂದು ಕಛೇರಿಯಲ್ಲಿ ಹಾಡಿದ ಕೀರ್ತನೆಗಳ ವಿವರವನ್ನೋ, ರಾಗದ ವಿವರಣೆಯನ್ನೋ ನೀಡುವುದು ಹಾಗಾದರೆ ವಿಮರ್ಶೆಯೇ? ಅಲ್ಲ. ವಿಶ್ಲೇಷಣೆಯನ್ನೇ ವಿಮರ್ಶೆ ಎನ್ನಬಹುದೇ? ಎಂದರೂ ಆ ನಿಲುವೂ ತಪ್ಪೇ. ವಿಶ್ಲೇಷಣೆಯಲ್ಲಿ ತೀರ್ಮಾನವಿರುವುದಿಲ್ಲ ; ಒಂದು ಆರೋಗ್ಯಕರ ಸಂವಾದ ಸಾಧ್ಯವಿರುತ್ತದೆ. ಅಲ್ಲಿಗೆ ವಿಮರ್ಶೆ ಏನನ್ನು ಮಾಡಬೇಕು?

ನನಗೆ ಅನ್ನಿಸುವುದು ಹೀಗೆ. ವಿಮರ್ಶೆ ಪ್ರಶಂಸೆ ಮಾದರಿಗೆ ಒಗ್ಗಿಕೊಳ್ಳಬೇಕು. ಇಲ್ಲಿ ಪ್ರಶಂಸೆಯ ಅರ್ಥ ವ್ಯಕ್ತಿ ಪ್ರಶಂಸೆಯಾಗಲೀ, ಸಂಸ್ಥೆ ಪ್ರಶಂಸೆಯಾಗಲೀ, ಕಲೆಯ ಪ್ರಶಂಸೆಯಾಗಲೀ ಅಲ್ಲ. ಇಲ್ಲಿ ಆಗಬೇಕಾದದ್ದು ನಿಜವಾಗಿಯೂ ಆರ್ಟ್ ಅಪ್ರಿಷಿಯೇಷನ್. ವಾಣಿಜ್ಯ ವಿಷಯಕ್ಕೆ ಸಂಬಂಧಿಸಿ ಅಪ್ರಿಷಿಯೇಷನ್ ಎಂದರೆ ಅಭಿವೃದ್ಧಿ ಎನ್ನುವ ಅರ್ಥವೂ ಇದೆ.

ಅಮೂರ್ತ ಕಲೆಗಳ ಸಂದರ್ಭದಲ್ಲೂ ಈ ಅಭಿವೃದ್ಧಿಯಾಗಬೇಕು. ಕಲೆಯ, ಕಲಾವಿದನ ಹಾಗೂ ಸಂಗೀತ ಕಛೇರಿಯ ಸೊಬಗಿನ ಅಭಿವೃದ್ಧಿಯಾಗಬೇಕು. ಈ ದಿಸೆಯಲ್ಲಿ ವಿಮರ್ಶಕರು ತಮ್ಮ ತಜ್ಞತೆಯನ್ನು ಮೆರೆಯಬೇಕು.

ಒಂದು ಸಂಗೀತ ಕಛೇರಿಯ ಪರಿಪೂರ್ಣತೆಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಸಾಧ್ಯವಾಗಿಸುವ ನೆಲೆಯಲ್ಲಿ ವಿಮರ್ಶಕರು ಕ್ರಿಯಾಶೀಲರಾಗಬೇಕು. ಹಾಗೆಯೇ ರಸಾನುಭೂತಿಗೆ ಸಾಧ್ಯವಾಗುವ ಲಕ್ಷಣಗಳನ್ನು ಕಲಾವಿದರಿಗೆ ಮನದಟ್ಟು ಮಾಡುವ ಕಾರ್ಯವೂ ನಡೆಯಬೇಕು. ಮೂರು ಗಂಟೆಯ ಕಛೇರಿಯ ಒಟ್ಟು ಅನುಭೂತಿಗೆ ಪೂರಕ ಅಂಶಗಳನ್ನು ಒದಗಿಸುವ ಕೆಲಸವೂ ವಿಮರ್ಶಕನ ನೆಲೆಯಿಂದಲೇ ಹೊರಡಬೇಕಾದದ್ದು.

ತಜ್ಞತೆ ಎಂದಿಗೂ ವಿರೋಧದ ನೆಲೆಯಿಂದ ಹುಟ್ಟುವುದಿಲ್ಲ ; ಬದಲಿಗೆ ಸ್ವೀಕಾರ್ಹ ನೆಲೆಯಿಂದ ಹುಟ್ಟುತ್ತದೆ. ಪ್ರಯೋಗಶೀಲತೆ ಇಲ್ಲದೇ ಪರಂಪರೆ ಬೆಳೆಯಲಾರದು ಎಂಬುದು ಸ್ಪಷ್ಟ. ಕಲಾವಿದನಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸುವುದಲ್ಲದೇ, ಒಂದು ಪರಂಪರೆಯ ನಿರಂತರ ಪ್ರವಹಿಸುವಿಕೆಗೆ ಅರ್ಥಪೂರ್ಣ ಸಹಕಾರ ನೀಡಬಲ್ಲದು ಈ ತಜ್ಞತೆ. ಪ್ರತಿ ಹೊತ್ತಿನ ಪ್ರಯೋಗಶೀಲತೆಯನ್ನೂ ಸೂಕ್ಷವಾಗಿ ಗುರುತಿಸುತ್ತಲೇ ಅದರಿಂದಾಗಬಹುದಾದ ಗುಣಾವಗುಣಗಳನ್ನು ಲಕ್ಷಿಸಿ ನಿರ್ದಿಷ್ಟತೆ ರೂಪಿಸುವುದೂ ಈ ತಜ್ಞರ ಹೊಣೆ.

ಇಂತಹ ತಜ್ಞರಿಗೆ ಪ್ರಯೋಗಶೀಲತೆ ಯಾವುದೇ ದಿಕ್ಕಿನಿಂದ ಬಂದರೂ ಒಪ್ಪಿಕೊಳ್ಳುವ ಶುದ್ಧ ಮನಸ್ಥಿತಿ ಬೇಕು. ಹಿರಿಯನೋ, ಕಿರಿಯನೋ ಎಂಬ ಮಾತು ಬಿಟ್ಟು, ಪ್ರಯೋಗಕ್ಕೊಂದು ಪ್ರೇರಣೆ ನೀಡುವ ವಾತಾವರಣ ನಿರ್ಮಿಸುವ ಇಚ್ಛೆ ಇರಬೇಕು. ಜತೆಗೆ ಟೀಕೆಯನ್ನೂ ಸೂಕ್ಷ್ಮವಾದ ದನಿಯಲ್ಲಿ ಹೇಳುವ ಮುಖೇನ ಆದ ತಪ್ಪನ್ನು ಸರಿಪಡಿಸುವ ಪ್ರಯತ್ನಶೀಲತೆ ಬೇಕು. ಇದೆಲ್ಲಕ್ಕಿಂತ ಅವರ ಮುಖ್ಯ ಹೊಣೆ ಸೊಬಗನ್ನು ಹೆಚ್ಚಿಸುವ ಪರಿಯಾಗಿರಬೇಕು. ಪ್ರತಿಯೊಬ್ಬನನ್ನೂ ರಸಾನುಭೂತಿಯ ಕಡೆಗೆ ನಡೆಸುವ ಕಾರ್ಯದಲ್ಲಿ ವಿಮರ್ಶಕ ಮಹತ್ವದ ಪಾತ್ರ ವಹಿಸುತ್ತಾನೆ. ಇದು ಆಗಬೇಕಾದದ್ದೇ.

ಪ್ರತಿ ಸಂದರ್ಭದಲ್ಲೂ ಸಂಗೀತದ ಬಗ್ಗೆ ಮತ್ತೊಬ್ಬ ಅರಸಿಕನಲ್ಲಿ ಪ್ರೀತಿ ಹುಟ್ಟಿಸುತ್ತೇನೆ, ಕಲೆಯ ಬಗ್ಗೆ ಗಮನ ಹರಿಸಲು ಪ್ರಯತ್ನಿಸುತ್ತೇನೆ ಎಂಬ ಸೌಜನ್ಯ, ವಿನಯವೂ ವಿಮರ್ಶಕನಲ್ಲಿರಬೇಕು. ಅಷ್ಟು ಬಿಟ್ಟರೆ ಸಂಗೀತ, ಚಿತ್ರಕಲೆಯನ್ನು (ಅಮೂರ್ತ ಕಲಾ ಪ್ರಕಾರಗಳು) ಏನೂ ಮಾಡಲಿಕ್ಕಾಗದು.

ಸಾಹಿತ್ಯದ ವಿಷಯದಲ್ಲಿ ವಿಮರ್ಶೆಯ ಪಾತ್ರ ಬೇರೆಯಾದದ್ದು. ಸಾಹಿತ್ಯ ಕೃತಿಗೂ ವಿಮರ್ಶೆ ಯಾಕೆ ಬೇಕು? ಎಂಬ ಮಾತೂ ಇದೆ. ಹಾಗಾದರೆ ನೀವು ಯಾಕೆ ಕಾದಂಬರಿ, ಕಥೆ, ಕವಿತೆ ಬರೆಯುತ್ತೀರಿ? ಎನ್ನುವ ವಿಮರ್ಶಕರಿದ್ದಾರೆ. ಆದರೆ ಆ ಬಗ್ಗೆ ಇಲ್ಲಿ ಹೆಚ್ಚಿನ ಚರ್ಚೆ ಬೆಳೆಸುವುದಿಲ್ಲ. ನಮ್ಮ ಮೂಲ ಚರ್ಚೆಯ ನೆಲೆ ಕಲಾ ಪ್ರಕಾರಗಳ ಬಗ್ಗೆ.

ಶಾಸ್ತ್ರ ಇರುವುದು ಮೀರಲಿಕ್ಕೋ, ಆ ಮಿತಿಯೊಳಗೇ ಸುತ್ತಾಡಲಿಕ್ಕೋ ಎಂಬುದು ನಿಗದಿಯಾಗಬೇಕು. ಶಾಸ್ತ್ರವೇ ಒಂದು ಅಂಚುಪಟ್ಟಿಯಾಗಿ ಬಿಟ್ಟರೆ, ಪ್ರಯೋಗಶೀಲತೆಗೆ ಬೆದರುಬೊಂಬೆಯಾದರೆ ಪರಂಪರೆಯ ಪ್ರವಹಿಸುವಿಕೆಗೆ ಅಡ್ಡಿಯಾಗಬಲ್ಲದು. ಶಾಸ್ತ್ರ ಮೂಲಧಾತು. ಕಲಾವಿದನ ಪ್ರತಿ ಪ್ರಯತ್ನವೂ ಈ ನೆಲೆಯಿಂದಲೇ ಹೊರಟಿರಬೇಕು. ದಿಗಂತದೆತ್ತರ ದಲ್ಲಿ ಗಾಳಿಪಟ ಹಾರಿಸುವ ಹುಡುಗ ನಿಂತಿರುವುದು ನೆಲದ ಮೇಲೆ. ಅಲ್ಲಿಗೆ ನೆಲೆವೇ ನೆಲೆ. ಗಾಳಿಪಟ ಹಾರುವ ಪ್ರದೇಶ ಗಾಳಿಪಟದ ನೆಲೆಯೇ ಹೊರತು ಹುಡುಗನ್ನದಲ್ಲ. ಪ್ರಯೋಗಶೀಲತೆ ಗಾಳಿಪಟದ ಸಂಕೇತವಾಗಿರಿಸಿಕೊಂಡರೆ, ಕಲಾವಿದ ಇಲ್ಲಿ ಹುಡುಗ ಎಂದು ವ್ಯಾಖ್ಯಾನಿಸಿಕೊಳ್ಳಬಹುದು. ಶಾಸ್ತ್ರ ಇಂತಹ ಒಂದು ದಾರ ಅಥವಾ ನೆಲ. ಅದರ ಆಧಾರದ ಮೇಲೆ ಹಾರುವ ಗಾಳಿಪಟ ಪ್ರಯೋಗಶೀಲತೆ.

ಆದರಿಂದು ಇಂತಹ ಪ್ರಯೋಗಶೀಲತೆಯನ್ನು ಬೆಳೆಸುವ ವಿಮರ್ಶಕರ ಸಂಖ್ಯೆ ಕಡಿಮೆಯೇ. ಯದ್ವಾತದ್ವಾ ಹೊಗಳುವುದು ಅಥವಾ ಟೀಕಿಸುವುದಷ್ಟೇ ವಿಮರ್ಶೆಯ ಎನಿಸಿಬಿಟ್ಟರೆ ಕಲಾವಿದರು ಯಾವುದನ್ನು ಆರಿಸಿಕೊಳ್ಳಬೇಕು ? ಜನಪ್ರಿಯತೆ ನಮ್ಮಲ್ಲಿ ಸೃಜನಶೀಲತೆ ಬೆಳೆಸುತ್ತದೋ ಅಥವಾ ಪ್ರಬುದ್ಧತೆ, ನಿರಂತರ ಪ್ರಯತ್ನಶೀಲತೆಯೋ ಅಥವಾ ಇನ್ನೇನೋ ಎಂಬುದು ಇನ್ನೂ ನಮ್ಮ ವಿಮರ್ಶಕರಿಗೆ ಸ್ಪಷ್ಟವಾಗಿಲ್ಲ.

ಪ್ರಯೋಗ ಪ್ರತಿ ಜನಪ್ರಿಯ ಅಥವಾ ಪ್ರತಿಷ್ಠಿತ ಕಲಾವಿದನ ಸೊತ್ತು ಎಂಬಂತೆ ಪೇಟೆಂಟ್ ಕೊಡುವ ಮಾದರಿ ಉದ್ಭವಿಸುತ್ತಿದೆ. ಇಲ್ಲಿ ಹೊಸದೇನನ್ನೋ ಮಾಡಬೇಕೆಂದು ಹುಮ್ಮಸ್ಸಿನಿಂದ ಪುಟಿಯುವ ಮನಸ್ಸಿಗೆ ವಯಸ್ಸಾಗಿರಬೇಕು ಎಂದು ಆಶಿಸುವುದು ಎಷ್ಟರ ಮಟ್ಟಿಗೆ ಸರಿ ? ಸಂಪ್ರದಾಯದ ಹೆಸರಿನಲ್ಲಿ ಮೀರುವ ಪ್ರತಿ ಯತ್ನವನ್ನು ಕಟ್ಟಿ ಹಾಕುವುದು ಸರಿಯೇ ?  ಹೋಗಲಿ, ವಿಮರ್ಶಕರು ಒಪ್ಪಿಕೊಂಡದ್ದನ್ನು ಮಾತ್ರ ಜನ ಒಪ್ಪಿಕೊಳ್ಳುತ್ತಾರೆಯೇ?   ಇವೆಲ್ಲವೂ ಪ್ರಶ್ನೆಗಳು.

ಇತ್ತೀಚೆಗೆ ನಡೆದ ಒಂದು ಉದಾಹರಣೆ. ಕರ್ನಾಟಕ ಮೂಲದ ಅನಿವಾಸಿ ಕಲಾವಿದ ಬಂದು ಸಂಗೀತ ಕಛೇರಿ ಪ್ರಸ್ತುತ ಪಡಿಸಿದರು. ಇನ್ನೂ ಯುವ ಕಲಾವಿದ. ಕಛೇರಿ ಚೆನ್ನಾಗಿಯೇ ಇತ್ತು. ಆರಿಸಿಕೊಂಡ ವರ್ಣ, ಅದರ ನಿರೂಪಣೆ, ಸಾಂಗತ್ಯ ಎಲ್ಲವೂ ಸೂಕ್ತವಾಗಿತ್ತು. ಟೀಕಿಸುವುದೇ ನಿಮ್ಮ ಉದ್ದೇಶವಾದಾಗ ಏನಾದರೂ ಹುಡುಕಲೇಬೇಕೆಂಬ ಮನೋಭಾವ ಕೆಲವು ವಿಮರ್ಶಕರದ್ದು. ಅಂದು ಕಾರ್ಯಕ್ರಮದಲ್ಲಿ ಹಾಜರಿದ್ದ ವಿಮರ್ಶಕರ ಬಳಿ ಕಲಾವಿದ ಕಛೇರಿ ಮುಗಿಸಿ ಬಂದಾಗ ” ಎಲ್ಲಾ ಸರಿ, ಆದರೂ ತಪ್ಪು’ ಎನ್ನುವ ಧಾಟಿಯಲ್ಲಿ ಮಾತನಾಡಿದರು. “ನಿನಗೆ ಅರೋಗೆನ್ಸ್ ಇದೆ. ಈಗಲೇ ಎಲ್ಲಾ ಕಲಿತಿದ್ದೇನೆ ಎಂಬ ಅಹಂಕಾರ ಇದೆಯಲ್ಲ’ ಎಂದು ಝಾಡಿಸಿದರೆ  ಹೇಗಿರುತ್ತೆ?  ಇದು ಕಲೆಯನ್ನು ಬೆಳೆಸುವ ಯಾವ ಮಾದರಿ? ಯಾವ ಪ್ರಶಂಸೆ ?

ಸಂಗೀತ ಕಛೇರಿಯ ವಿಮರ್ಶೆಯಲ್ಲಿ ಕಲಾವಿದ ಪ್ರಸ್ತುತಪಡಿಸಿದ ಕೃತಿಗಳ, ರಾಗಗಳ  ಮಾಹಿತಿ ಬಿಟ್ಟರೆ ಬೇರೇನೂ ಇರುವುದಿಲ್ಲ. ಇಲ್ಲದಿದ್ದರೆ ಇಲ್ಲ ಸಲ್ಲದ ಉಪಮೆಗಳ ಅಲಂಕಾರ. ಪದಗಳಲ್ಲಿ ವರ್ಣಿಸಲಾಗದ ಅನುಭವವನ್ನು  ಪದಗಳಲ್ಲಿ ಹೇಳಲಾರೆ ಎಂದು ಒಪ್ಪಿಕೊಳ್ಳುವ, ಹಾಗೆಯೇ ಕ್ರಿಯಾಶೀಲವಾಗುವ ಪ್ರಯತ್ನವೇ ಇಲ್ಲ. ವರ್ಣನೆ ಮಿತಿ ಮೀರುವ ನೆಲೆಯಲ್ಲೇ ವಿಮರ್ಶೆ ಎನ್ನಿಸಿಕೊಳ್ಳುವುದು ಅಂತ್ಯವಾಗುತ್ತದೆ. ಇಷ್ಟು ಬಿಟ್ಟರೆ, ಈ ಕೃತಿ ಸರಿಯಾಗಿ ನಿರೂಪಿಸಲಿಲ್ಲ, ನೆರವಲ್ ಸರಿ ಮಾಡಲಿಲ್ಲ, ಇಂತದ್ದು ಬಿಟ್ಟರೆ ಬೇರೇನು? ಇದನ್ನು ಹೊರತುಪಡಿಸಿದ ಗುಣಾತ್ಮಕ ಅಂಶಗಳೇನು? ಯೇಸುದಾಸ್ ಅವರ ಒಂದು ಕಛೇರಿಗಿಂತ ಈ ಕಛೇರಿಯ ಅಂಶವೇನು?  ಹೊಸ ಪ್ರಯತ್ನ ಹೇಗಿರಬಹುದಿತ್ತು? ಎಂಬ ಸಲಹೆ ರೂಪದ ನೆಲೆ ಯಾಕೆ ಸಾಧ್ಯವಾಗದು?

ಒಬ್ಬ ಕ್ರಿಯಾಶೀಲ ಕಲಾವಿದನನ್ನು ಬೆಳೆಸುವವ ಮತ್ತು ಇಳಿಸುವ ಶಕ್ತಿ ನನ್ನಲ್ಲೇ ಅಡಗಿದೆ ಎಂದು ತಿಳಿದುಕೊಳ್ಳುವ ವಿಮರ್ಶಕನಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಾಗದು. ಪ್ರಚಾರದ ಅಬ್ಬರ ಅನಿವಾರ್ಯ ಎನಿಸಿರುವ ಹೊತ್ತಿನಲ್ಲಿ ಪತ್ರಿಕೆಗಳಲ್ಲಿ ಬರುವ ವಿಮರ್ಶೆಯನ್ನು ಕಡೆಗಣಿಸಲಾಗದು. ಆದರೆ ಅಲ್ಲೂ ವಸ್ತುನಿಷ್ಠ ವಿಮರ್ಶೆ ಬರಬೇಕು, ಅದು ಕಲಾವಿದ, ಕಲೆಯ ಬೆಳವಣಿಗೆಗೆ ಪೂರಕವಾಗಿರಬೇಕು. ತಪ್ಪನ್ನು ಸರಿಪಡಿಸುವ ಹಾದಿಯಲ್ಲಿ.

ಮಾರ್ಗದರ್ಶಕನಾಗಿ ಕಾರ್ಯ ನಿರ್ವಹಿಸುವುದು ಅತ್ಯಂತ ಸುಲಭದ ಕೆಲಸ ದಾರಿ ರೂಪಿಸುವವನಿಗೆ ಹೋಲಿಸಿದರೆ. ಇಲ್ಲಿ ವಿಮರ್ಶಕ ದಾರಿ ರೂಪಿಸುವವನಾಗಬೇಕು. ಅವನೊಬ್ಬ ಮುಂಚೂಣಿಕಾರ. ಅಭಿರುಚಿ ನಿರ್ಮಾಣದ ಕಾರ್ಯದಲ್ಲಿ ಅವನೇ ಮೊದಲಿಗ. ಅವನ ಹಿಂದೆ ಮಿಕ್ಕವರೆಲ್ಲರೂ. ಆದರೆ ಈಗ ಬಹುಪಾಲು ವಿಮರ್ಶಕರು ಮಾರ್ಗದರ್ಶಕರಂತೆ ಠೀವಿ ಕೊಡುತ್ತಿರುವುದು ಪರಂಪರೆಯ ಪ್ರವಹಿಸುವಿಕೆಯ ವೇಗವನ್ನು ಕುಂಠಿತಗೊಳಿಸಬಲ್ಲದು.

ಸಂಕ ಎಂಬುದು ಗ್ರಾಮೀಣ ನುಡಿ. ಕರಾವಳಿ ಬದಿಯ ಗದ್ದೆಬೈಲಿನಲ್ಲಿರುವ ತೋಡನ್ನು ದಾಟಲು ನಿರ್ಮಿಸುವ ಸೇತುವೆ ಮಾದರಿಯದ್ದು. ಇದರ ಒಟ್ಟೂ ಕಾರ್ಯ ದಾರಿಹೋಕನನ್ನು ಮತ್ತೊಂದು ತುದಿಗೆ ದಾಟಿಸುವುದು ಅಥವಾ ದಾಟುವ ಪ್ರಕ್ರಿಯೆಯಲ್ಲಿ ಒಂದು ಪಾತ್ರ ವಹಿಸುವುದಷ್ಟೆ.

ಎರಡು ತೀರಗಳ ಅಥವಾ ಎರಡು ಬದಿಗಳ ನಡುವೆ ಸಂಬಂಧಸೇತುವಾಗಿ ಕಾರ್ಯ ನಿರ್ವಹಿಸುವ ಸಂಕದ ಪಾತ್ರವನ್ನೇ ವಿಮರ್ಶೆ ವಹಿಸಬೇಕೇ ? ಎಂಬುದು ಚರ್ಚೆಗೀಡಾಗಬೇಕು. ವಿಮರ್ಶೆ ಮತ್ತೊಂದು ತೀರವೆನ್ನುವ ಹಾಗೆ ಅಸ್ತಿತ್ವ ಕಲ್ಪಿಸಲು ಹೊರಟರೆ ಅದರದ್ದೇ ಬೇರೆ ಹಾದಿ. ಅಮೂರ್ತ ಕಲೆಗಳ ಅನುಭವದ ವಿಚಾರದಲ್ಲಿ ವಿಮರ್ಶೆ ಕೇವಲ ಸಂಕವಷ್ಟೇ. ಇದು ಲಘುವಾದ ಮಾತಲ್ಲ ; ಸಂಬಂಧ ಬೆಸೆಯುವ ಗುರುತರವಾದ ಹೊಣೆ. ಇದನ್ನು ವಿಮರ್ಶಕ ಹೊತ್ತರೆ ವಿಮರ್ಶೆಗೆ ಮತ್ತಷ್ಟು ಘನತೆ ಬಂದೀತಲ್ಲವೇ ?                                            : ಬರಹ – ಗಂಧ, ಚಿತ್ರ- ಸುಗಂಧ

(ಜುಗಲ್ ಬಂದಿ ಚರ್ಚೆಯ ಅಂಕಣ. ನಾನು ಆರಂಭಿಸಿದ್ದೇನೆ. ದಯವಿಟ್ಟು ನೀವು ಮುಂದುವರೆಸಿ)

ನಮ್ಮ ಬ್ಲಾಗ್ ಗೆ ಸಿಕ್ಕ ಮೊದಲ ಪ್ರತಿಕ್ರಿಯೆಯೇ ಗೆಜ್ಜೆ ಕಟ್ಟಿಸಿದೆ. ನವಿಲು ಕುಣಿಯಲು ಕರೆಯುತ್ತಿದೆ. ನಾವಿನ್ನು ಕುಣಿಯಬೇಕಷ್ಟೇ. ಶ್ರೀದೇವಿ ಕಳಸದ ನಮ್ಮ ಕೂಗಿ ಕರೆಯುತ್ತಿರುವ ನವಿಲಿಗೆ ಸಂವಾದಿಸಿರುವುದು ಕವನದ ರೂಪದಲ್ಲಿ. ನಮ್ಮಲ್ಲೂ ಉತ್ಸಾಹ ಮೂಡಿಸಿದ ಮೊದಲ “ಘಮಘಮ” ದ ತರಂಗವಾದ್ದರಿಂದ ಇಲ್ಲಿ ಕೊಡುತ್ತಿದ್ದೇವೆ.

ಈ ಮಧ್ಯೆ ಈ ನವಿಲ ಕೂಗಿಸಿದವರು ಸುಗಂಧ.

ನಸುಗೆಂಪು ನಗೆಚೆಲ್ಲಿ
ನೆಲ-ಮುಗಿಲು ನಸುನಾಚಿ
ಕಡು ನೀಲಿ ಕೊರಳು, ಗಿಳಿಹಸಿರ ಕುಸುರಿ,
ನೆಲ ಕೆದರಿ ಗರಿ ಗೆದರಿ
ಗಿರ ಗಿರನೆ ತಿರು-ತಿರುಗಿ
ಮೈ ತುಂಬಾ ಕನಸ ಕಣ್ಣ,
ಮರಳುವನೆ ಮಾಧವ
ನುಡಿಸುವನೆ ಮುರಳಿಯ…

ಪ್ರತಿಕ್ರಿಯೆ ನೀಡಿದ ಶ್ರೀದೇವಿಗೂ ಧನ್ಯವಾದ. ಪ್ರೀತಿ ಮತ್ತು ಬ್ಲಾಗ್ ಗೆ ಭೇಟಿ ನೀಡುತ್ತಿರಿ.

ಗಂಧಸುಗಂಧ

wm12.jpg  

ಲ್ಲಿ ಅಚ್ಚು ಕಟ್ಟಾದ ಅಭಿನಯ ನೀಡಿ ಮನಸೂರೆಗೊಳ್ಳುವ ಪಾತ್ರಧಾರಿಗಳು ಪಕ್ಷಿಗಳು! ಪಕ್ಷಿಗಳಿಂದ ಶುರುವಾಗಿ ಅವುಗಳಿಂದಲೇ ಮುಂದುವರೆದು, ಮುಗಿಯುವ ಚಿತ್ರದಲ್ಲಿ ಕಥೆ ಗೌಣವಾಗಿಬಿಡುತ್ತದೆ. ೯೮ ನಿಮಿಷದ ಚಿತ್ರದ ಪ್ರತೀ ಫ್ರೇಂಗಳೂ ಅದ್ಭುತ ಕಾದಂಬರಿಗಳಾಗಿಬಿಡುತ್ತವೆ! ಹೀಗೆ, ಬೇಂದ್ರೆಯವರ ಹಕ್ಕಿ ಹಾರುತಿದೆ ನೋಡಿದಿರಾ? ಎಂಬ ಸಾಲುಗಳನ್ನು ನೆನಪಿಸುತ್ತಾ ಹಕ್ಕಿಗಳ ಹಾರುವಿಕೆಯೊಂದಿಗೇ ನಮ್ಮನ್ನು ಧ್ಯಾನಸ್ಥಿಥಿಗೊಯ್ಯುವ ಚಿತ್ರವೇ ವಿಂಗ್ಡ್ ಮೈಗ್ರೇಶನ್!
      ಅನುಭವಕ್ಕಿಂತ ಕಥೆ ಮುಖ್ಯವೆನಿಸಿದಲ್ಲಿ ಈ ಸಿನಿಮಾ ನಿಮಗಲ್ಲ! ಸಿನಿಮಾ ಸೀಮೆಯ ಸಿದ್ಧಾಂತಗಳ ಚೌಕಟ್ಟನ್ನು ಮೀರಿ ನಿಂತ ಈ ಚಿತ್ರದಲ್ಲಿ ಸಂಭಾಷಣೆಗಳೆಂಬ ಆಡಂಬರವಿಲ್ಲ. ಚಿತ್ರಕ್ಕೆ ಅದು ಅಗತ್ಯ ಅಂತನ್ನಿಸುವುದೂ ಇಲ್ಲ! ಚಿತ್ರದುದ್ದಕ್ಕೂ ತಡವರಿಸುತ್ತಾ ನೀಡುವ ವಿವರಣೆ ಕಿರಿ ಕಿರಿಯೆನ್ನಿಸಬಹುದು. ಹಾಗಾದಲ್ಲಿ ಸಬ್ ಟೈಟಲ್ ನೋಡಿ ಮಾಹಿತಿಗಳ ಕಟ್ಟು ಕಟ್ಟಬಹುದು. ಉಳಿದಂತೆ ಇಲ್ಲಿರುವುದು ನಿಸರ್ಗದ ಭಾಷೆಗೆ ಕಿವಿಯಾನಿಸುವವನಿಗೆ ಮಾತ್ರ ಅರ್ಥವಾಗಬಹುದಾದ ಹಕ್ಕಿಗಳ ಕಲರವ ಮತ್ತು ಚಿತ್ರದುದ್ದಕ್ಕೂ ಕಣ್ಣಿಗೆ ಹೋಲಿ! ಪ್ರೇಕ್ಷಕನಿಗೆ ನಗಿಸುವ, ಖುಷಿ ಪಡಿಸುವ, ನಾಚಿಕೆಯಿಂದ ಮುರುಟಿ ಹೋಗುವಂತೆ ಮಾಡುವ, ಕುರ್ಚಿಯಂಚಿಗೆ ತಂದು ಕೂರಿಸುವ, ಕೆಲವೊಮ್ಮೆ ಕಣ್ಣಂಚನ್ನು ತೇವಗೊಳಿಸುವ ಕಾರ್ಯದೊಂದಿಗೆ ಹಕ್ಕಿಗಳು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತವೆ. ಒಂದರ್ಥದಲ್ಲಿ ಈ ಚಿತ್ರ ನಿರ್ಮಿಸಿದ್ದು ಹಕ್ಕಿಗಳಿಗಾಗಿಯೇ ಎನ್ನಲಡ್ಡಿಯಿಲ್ಲ.
       ೯೮ ನಿಮಿಷಗಳ ಕಾಲ ಕೇವಲ ಹಕ್ಕಿಯ ಹಾರುವಿಕೆಯೊಂದನ್ನೇ ತೋರಿಸುತ್ತಾ ವೀಕ್ಷಕನ ಚಿತ್ತವನ್ನು ಚಿತ್ರದಿಂದಾಚೆ ಸರಿಯದಂತೆ ತಡೆದು ನಿಲ್ಲಿಸುವುದು ಸುಲಭದ ಮಾತಲ್ಲ. ಆದರೆ ವಿಂಗ್ಡ್ ಮೈಗ್ರೇಶನ್ನಲ್ಲಿ ಇದು ಸಾಧ್ಯವಾಗಲು ಕಾರಣ, ಹಕ್ಕಿಗಳ ಹಾರುವಿಕೆಯೊಡನೆ ಹಿನ್ನೆಲೆ ದೃಶ್ಯಗಳನ್ನು ಕಟ್ಟಿ ಕೊಟ್ಟಿರುವ ಪರಿ. ಸುಂದರ ಪ್ರಕೃತಿಯ ಅಗಾಧ ರಸರುಚಿಯ ಸಿಹಿ ಸ್ವಾನುಭವ ತೀರಾ ಸುಲಭವಾಗಿ ಬೇಕೆಂದರೆ ಮತ್ತೆ ಪರಿಹಾರ ವಿಂಗ್ಡ್ ಮೈಗ್ರೇಶನ್! ಚಿತ್ರ ನೋಡುತ್ತಲೇ ನೀವು ಪ್ರಪಂಚ ಪ್ರವಾಸ ಮುಗಿಸಲೂ ಬಹುದು! ಭಾರತದ ಹಿಮಾಲಯ ಪರ್ವತಗಳು, ಪೂರ್ವ ಯುರೋಪಿನ ಕೊಳಕು ಕೈಗಾರಿಕಾ ಜಿಲ್ಲೆಗಳು, ಸಹರಾ ಮರುಭೂಮಿ, ಮರುಭೂಮಿಯ ನಡುವಿನ ಸುಂದರ ಓಯಾಸಿಸ್‌ಗಳು, ಅಂಟಾರ್ಟಿಕಾದ ಹಿಮಾವೃತ ಪ್ರದೇಶಗಳು ಹೀಗೆ.

ಸಾವಿರಾರು ಕಿಲೋ ಮೀಟರ್‌ಗಳಾಚೆಗಿನ ನಿಖರ ಪ್ರದೇಶಕ್ಕೆ ಪ್ರತೀ ವರ್ಷ ವಲಸೆ ಹೋಗುವ ಹಕ್ಕಿಗಳ ವರ್ತನೆ ನಮಗೆಲ್ಲಾ ಅಚ್ಚರಿಯೆನಿಸಿದ್ದು ತೀರಾ ಇತ್ತೀಚೆಗೇನಲ್ಲ. ಪ್ರತಿ ಚಳಿಗಾಲದಲ್ಲಿ ನಿಯಮಿತವಾದ ಹಾದಿ(?)ಯಲ್ಲಿ ಪ್ರಪಂಚವನ್ನೆಲ್ಲಾ ಸುತ್ತುವ ಹಕ್ಕಿಗಳ ಕುರಿತು ನಮಗೆ ೮೦ ಮಿಲಿಯನ್ ವರ್ಷಗಳ ಇತಿಹಾಸ ದಕ್ಕಿದೆ. ಹಕ್ಕಿಗಳ ನಿಖರ ಹಾಗೂ ನಿರಂತರ ಪಯಣ, ಕೌತುಕದ ಪ್ರಸಂಗವೆನಿಸಿದಾರಭ್ಯ ಆ ಬಗೆಗಿನ ಸಂಶೋಧನೆ ನಡೆದೇ ಇತ್ತು.
     ಈ ನಿಟ್ಟಿನಲ್ಲಿ ಆರಂಭವಾದ ಸಂಶೋಧನೆಗಳು ಒತ್ತಟ್ಟಿಗಿರಲಿ. ಸಾವಿರಾರು ಮೈಲು ಹಾರುವ ಹಕ್ಕಿಗಳ ಜಾಡನ್ನು ಹಿಡಿದು ಹೊರಟರೆ ಎಂಥ ಅದ್ಭುತ ಸೃಷ್ಟಿ ಕಣ್ಣೆದುರು ಬಿಚ್ಚಿಕೊಳ್ಳಬಹುದು? ಜ್ಯಾಕಸ್ ಪೆರಿನ್ ತಡ ಮಾಡಲಿಲ್ಲ. ತಾವೇ ಬರೆದು ಹಣ ತೊಡಗಿಸಿ, ನಿರ್ದೇಶನವನ್ನೂ ಮಾಡ ಹೊರಟರು. ಮೈಕೆಲ್ ಡಿಬ್ಯಾಟ್ಸ್, ಗೈ ಜೆರ್ರಿ, ಪ್ರಾನ್ಸಿಸ್ ರಾಕ್ಸ್, ಜ್ಯಾಕಸ್ ಕ್ಲುಜೌದ್, ಕ್ರಿಸ್ಟೋಪ್ ಬರಾಟಿಯರ್, ಜೀನ್ ಡಾಸ್ರ್ಟ್, ಸ್ಟೀಫನ್ ಡುರಾನ್ ರ ಸಹಕಾರವೂ ಸಿಕ್ಕಿತು.
ಆಗ ಅವರ ಜೊತೆಗೂಡಿಸಿಕೊಂಡಿದ್ದು ಹದಿನೇಳು ಪೈಲಟ್‌ಗಳು, ೧೪ ಛಾಯಾಗ್ರಾಹಕರನ್ನೊಳಗೊಂಡ ನಾನೂರೈವತ್ತಕ್ಕೂ ಹೆಚ್ಚಿನ ಜನರಿದ್ದ ಐದು ತಂಡಗಳನ್ನು. ನಾಲ್ಕು ವರ್ಷಗಳ ಕಾಲ ಉತ್ತರ, ದಕ್ಷಿಣಾರ್ಧಗಳಲ್ಲಿ, ಸಾಗರ ಸಮುದ್ರಗಳಲ್ಲಿ, ಏಳು ಖಂಡಗಳಲ್ಲಿ, ಒಟ್ಟೂ ನಲವತ್ತು ದೇಶಗಳಲ್ಲಿ ಹಕ್ಕಿಗಳನ್ನು ಹಿಂಬಾಲಿಸಿದವು, ಈ ತಂಡಗಳು. ಪ್ಯಾರಿಸ್‌ನ ಐಫೆಲ್ ಟವರ್‌ನಿಂದ ಮೊದಲ್ಗೊಂಡು ದುರ್ದರ  ಅಮೇಜಾನ್, ಆರ್ಕ್ಟಿಕ್‌ವರೆಗೂ ಹೋಗಿ ಬಂದರು. ವಿಮಾನಗಳು, ಗ್ಲೈಡರ್‌ಗಳು, ಬಲೂನ್‌ಗಳು, ಹೆಲಿಕ್ಯಾಪ್ಟರ್‌ಗಳು, ಅನೇಕ ಅತ್ಯಾಧುನಿಕ ಉಪಕರಣಗಳು, ಅದ್ಭುತ ಶಕ್ತಿಯ ಕ್ಯಾಮರಾಗಳು ಬಳಕೆಯಾದವು. ಇವೆಲ್ಲವುಗಳ ಒಟ್ಟೂ ಪರಿಣಾಮವೇ ಮಾನವನ ಕಣ್ಣೆದುರು ಹಕ್ಕಿಗಳ ವಿಸ್ಮಯ ಜಗತ್ತೊಂದರ ಅನಾವರಣ. ನಾಲ್ಕು ವರ್ಷಗಳ ಸತತ ಶ್ರಮ ಈ ತಂಡಕ್ಕೆ ಕಿಂಚಿತ್ತೂ ಬೇಸರ ತಂದಿರಲಿಲ್ಲವೆಂಬುದನ್ನು ಚಿತ್ರ ನೋಡಿದ ಯಾರಾದರೂ ಹೇಳಬಹುದು. ಇದಕ್ಕೆ ವಿಂಗ್ಡ್ ಮೈಗ್ರೇಶನ್ ತಂಡದ ಪ್ರತಿಯೊಬ್ಬರಲ್ಲೂ ಏನಾದರೊಂದು ಸಾಧಿಸಬೇಕೆಂಬ ಅದಕ್ಕಿಂತ ಹೆಚ್ಚಾಗಿ ವಿಸ್ಮಯ ಘಟನೆಗಳನ್ನು ಸೆರೆ ಹಿಡಿದು ನಾಗರಿಕ ಜಗತ್ತಿನ ಮುಂದಿಡಬೇಕೆಂಬ ಕಳಕಳಿ, ತುಡಿತ ಕಾರಣವಿರಬಹುದು. ಏನೇ ಇರಲಿ ಪಕ್ಷಿಗಳ ಪರಿಧಿಯೊಳಗೆ ನುಗ್ಗಿ ಬರುವ ಮನಸ್ಸಿದ್ದರೆ ಸೂಕ್ತ ಆಯ್ಕೆ ವಿಂಗ್ಡ್ ಮೈಗ್ರೇಶನ್.

ಸುಗಂಧ                                   
          
 

ದಿನದರ್ಶಿ

ಏಪ್ರಿಲ್ 2024
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
1234567
891011121314
15161718192021
22232425262728
2930  

ಅನುಭವಿಸಿದವರು

  • 2,634 ಅನುಭಾವಿಗಳು